ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮಧ್ಯಾಹ್ನದ ನಂತರ ಮಳೆ ಬಿರುಸುಗೊಂಡಿದೆ.
ಕಳೆದೊಂದು ವಾರದಿಂದ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಜೋರಾಗಿದೆ. ಶಿವಮೊಗ್ಗ, ಸಾಗರ, ಕೋಣಂದೂರು, ಸೊರಬ, ಭದ್ರಾವತಿ ಹಾಗೂ ಹೊಳೆಹೊನ್ನೂರಿನಲ್ಲಿ ಗುಡುಗು–ಸಿಡಿಲು ಸಹಿತ ಗಂಟೆಗೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ಶಿಕಾರಿಪುರದಲ್ಲಿ ಸಾಧಾರಣ ಮಳೆಯಾಗಿದೆ. ಶಿವಮೊಗ್ಗದಲ್ಲಿ ರಾತ್ರಿಯೂ ಮಳೆ ಮುಂದುವರಿದಿತ್ತು.
ಮರ ಬಿದ್ದು ಸಂಚಾರಕ್ಕೆ ಅಡ್ಡಿ:
ಶಿವಮೊಗ್ಗ– ತೀರ್ಥಹಳ್ಳಿ ರಸ್ತೆಯಲ್ಲಿ ಗಾಜನೂರು ಚೆಕ್ಪೋಸ್ಟ್ ಸಮೀಪ ರಸ್ತೆಗೆ ಅಡ್ಡಲಾಗಿ ಬೃಹತ್ ಆಲದ ಮರವೊಂದು ಮಧ್ಯಾಹ್ನ ಬೀಸಿದ ಜೋರು ಗಾಳಿಗೆ ಬುಡಸಮೇತ ಉರುಳಿಬಿದ್ದಿತು. ಇದರಿಂದ ಶಿವಮೊಗ್ಗ– ತೀರ್ಥಹಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ವಾಹನ ಸಂಚಾರಕ್ಕೆ ಹೆದ್ದಾರಿ ಪಕ್ಕ ಕಿರಿದಾದ ತಾತ್ಕಾಲಿಕ ರಸ್ತೆ ಮಾಡಿಕೊಟ್ಟ ಸಕ್ರೆಬೈಲು ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದರು.
ಸಿಡಿಲು ಬಡಿದು 4 ಹಸು ಸಾವು:
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದ ನಾಗರಾಜಯ್ಯ ಅವರ ಕೊಟ್ಟಿಗೆಯಲ್ಲಿದ್ದ 4 ಹಸುಗಳು ಮಂಗಳವಾರ ರಾತ್ರಿ ಸಿಡಿಲು ಬಡಿದು ಸಾವಿಗೀಡಾಗಿವೆ.
ಕೊಟ್ಟಿಗೆಯಲ್ಲಿದ್ದ ಹಸುಗಳು ಸಿಡಿಲ ಹೊಡೆತಕ್ಕೆ ಸಿಲುಕಿ ಕೂಗಿಕೊಂಡು ಮೃತಪಟ್ಟವು. ಕೊಟ್ಟಿಗೆಗೆ ಹತ್ತಿದ್ದ ಬೆಂಕಿಯನ್ನು ಗ್ರಾಮಸ್ಥರ ಸಹಕಾರದಿಂದ ಬೆಂಕಿ ನಂದಿಸಲಾಯಿತು.
ಬುಧವಾರ ಮಧ್ಯಾಹ್ನ ದಾವಣಗೆರೆ ನಗರ ಸೇರಿ ಹೊನ್ನಾಳಿ, ನ್ಯಾಮತಿ ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿಯಿತು. ಚಿತ್ರದುರ್ಗ ತಾಲ್ಲೂಕಿನ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬೆಳಿಗ್ಗೆ ಅರ್ಧತಾಸು ಉತ್ತಮ ಮಳೆ ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.