ಶಿವಮೊಗ್ಗ: ಇಲ್ಲಿನ ರಂಗಾಯಣದಲ್ಲಿ ಮೂರನೇ ಹಂತದ ಕಾಲೇಜು ರಂಗೋತ್ಸವ ಕಾರ್ಯಕ್ರಮ ಮಾರ್ಚ್ 15ರಿಂದ 17ರವರೆಗೆ ನಡೆಯಲಿದೆ. ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.
ಮಾ.15ರಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠದ ಎಸ್ಜೆವಿಪಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ ರಚನೆಯ ಧರಣಿ ಮಂಡಲ ನಾಟಕ ಆಡಲಿದ್ದು, ಬಾಗಲಕೋಟೆಯ ಮಹಾಂತೇಶ ಅದೀಮ ನಿರ್ದೇಶಿಸಿದ್ದಾರೆ.
ಮಾ.16ರಂದು ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ ರಚನೆಯ ಸುಣ್ಣದ ಸುತ್ತ ನಾಟಕ ಆಡಲಿದ್ದಾರೆ. ಎ.ಎನ್.ವಿದ್ಯಾರಾಣಿ ನಿರ್ದೇಶನ ಮಾಡಿದ್ದಾರೆ.
ಮಾ.17ರಂದು ಬೆಂಗಳೂರಿನ ದಕ್ಷಾ ಅಕಾಡೆಮಿ ವಿದ್ಯಾರ್ಥಿಗಳು ಮಹಾಂತೇಶ ರಾಮದುರ್ಗ ರಚನೆಯ, ಉಡುಪಿಯ ಶಿಲ್ಪಾ ಶೆಟ್ಟಿ ನಿರ್ದೇಶಿಸಿರುವ ಸೋರುತಿಹುದು ಸಂಬಂಧ ನಾಟಕ ಪ್ರದರ್ಶನ ಮಾಡಲಿದ್ದಾರೆ.
ಮೂರು ದಿನಗಳು ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಅಣ್ಣಪ್ಪ ಒಂಟಿಮಾಳಗಿ ಹಾಗೂ ಕೆ. ಸತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.