ಶಿವಮೊಗ್ಗ: ‘ನೀರಾವರಿ ನಿಗಮದಿಂದ ಸಕಾಲಕ್ಕೆ ಭದ್ರಾ ನಾಲೆ ದುರಸ್ತಿ ಆಗದೇ ನೀರು ಸೋರಿಕೆ ಆಗಿ ರೈತರು ಬೆಳೆದ ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಸಾಗರ ರಸ್ತೆಯ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಗೆ ಸೋಮವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊನ್ನಾಳಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ಭದ್ರಾ ನಾಲೆ ಹಲವೆಡೆ ಬಿರುಕು ಬಿಟ್ಟಿದೆ. ಕೆಲವು ಕಡೆ ಕಾಲುವೆ ಸಂಪೂರ್ಣ ಹಾಳಾಗಿದೆ. ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಸಾವಿರಾರು ರೈತರೊಂದಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಹಾಕಲು ನಿರ್ಧರಿಸಿದ್ದೆವು. ಆದರೆ, ಮಂಗಳವಾರದೊಳಗೆ ಕಾಲುವೆ ದುರಸ್ತಿ ಮಾಡಿ ನೀರು ಬಿಡುವುದಾಗಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಮುತ್ತಿಗೆ ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.
ಸರ್ಕಾರ ದಿವಾಳಿಯಾಗಿದೆ. ನೀರಾವರಿ ನಿಗಮವೊಂದರಲ್ಲೇ ಗುತ್ತಿಗೆದಾರರಿಗೆ ₹5500 ಕೋಟಿ ಬಾಕಿ ಬರಬೇಕಿದೆ. ರಾಜ್ಯದ ಯಾವುದೇ ನೀರಾವರಿ ನಿಗಮದಲ್ಲೂ ಕೂಡ ಕೆಲಸವಾಗುತ್ತಿಲ್ಲ. ಕೆಲಸ ಮಾಡಲು ಗುತ್ತಿಗೆದಾರರು ಯಾರೂ ಕೂಡ ಮುಂದೆ ಬರುತ್ತಿಲ್ಲ ಎಂದರು.
ಅತಿವೃಷ್ಟಿ ಸಂದರ್ಭದಲ್ಲಿ ಕೈಯಿಂದ ಹಣ ಹಾಕಿದ ಗುತ್ತಿಗೆದಾರರಿಗೆ ಕಾಮಗಾರಿ ಮುಗಿದು ಎಂಟು ತಿಂಗಳಾದರೂ ಹಣ ನೀಡಿಲ್ಲ. ಟೆಂಡರ್ ಪ್ರಕ್ರಿಯೆ ಆಗಿದೆ ಎಂದು ಸುಳ್ಳು ಹೇಳುತ್ತಾರೆ. ಸರ್ಕಾರದ ಬಳಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಇನ್ನು ನಾಲೆ ದುರಸ್ತಿಗೆ ಹಣ ಎಲ್ಲಿಂದ ತರುತ್ತಾರೆ? ರೈತರು ರೊಚ್ಚಿಗೇಳುವ ಮೊದಲು ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಹೇಳಿದ ಅವರು, ಕೆಲಸ ಮುಗಿಸಿ ಬುಧವಾರದೊಳಗೆ ನೀರು ಬಿಡದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸಾಸ್ವೆಹಳ್ಳಿ ಭಾಗದಲ್ಲಿ ಈಗ ನಡೆಯುತ್ತಿರುವ ಭದ್ರಾ ನಾಲೆ ಕಾಮಗಾರಿ ಕಳಪೆಯಾಗಿದೆ. ಕಮ್ಮಘಟ್ಟ, ಕ್ಯಾಸಿನಕೆರೆ, ಕುಳಘಟ್ಟ ಭಾಗದಲ್ಲಿ ಕೂಡ ಕಾಲುವೆ ಕೂಡ ಸಂಪೂರ್ಣ ಹಾಳಾಗಿದ್ದು, ಹೊನ್ನಾಳಿಗೆ ನೀರೇ ಬರುತ್ತಿಲ್ಲ. ಮೊದಲು ಅದನ್ನು ದುರಸ್ತಿ ಮಾಡಿ ಎಂದು ಎಚ್ಚರಿಸಿದರು.
ಇಲಾಖೆಯ ಅಧೀಕ್ಷಕ ಎಂಜಿನಿಯರ್ ರವಿಚಂದ್ರ ಹಾಗೂ ಡಿಸಿಇ ಲೋಹಿತಾಶ್ವ ಅವರೊಂದಿಗೆ ಕಾಲುವೆ ದುರಸ್ತಿಗೆ ಸಂಬಂಧಿಸಿದಂತೆ ಇದೇ ವೇಳೆ ರೇಣುಕಾಚಾರ್ಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಹೊನ್ನಾಳಿ ಭಾಗದ ರೈತರ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.