ADVERTISEMENT

ತೀರ್ಥಹಳ್ಳಿ: ಮೊಕದ್ದಮೆ ಹಿಂಪಡೆಯಲು ಆಗ್ರಹ

ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷರ ವಿರುದ್ಧ ಚೀಟಿನಿಧಿ ಸದಸ್ಯೆಯಿಂದ ದೂರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 4:39 IST
Last Updated 3 ನವೆಂಬರ್ 2021, 4:39 IST
ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಸುಳ್ಳು ದೂರನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಹಕಾರಿ ಸಂಸ್ಥೆಗಳ ಪ್ರಮುಖರು, ಠೇವಣಿದಾರರು, ಷೇರುದಾರ ಸದಸ್ಯರು ಮನವಿ ಸಲ್ಲಿಸಿದರು.
ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಸುಳ್ಳು ದೂರನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಹಕಾರಿ ಸಂಸ್ಥೆಗಳ ಪ್ರಮುಖರು, ಠೇವಣಿದಾರರು, ಷೇರುದಾರ ಸದಸ್ಯರು ಮನವಿ ಸಲ್ಲಿಸಿದರು.   

ತೀರ್ಥಹಳ್ಳಿ: ಸಹ್ಯಾದ್ರಿ ಅಡಿಕೆ ಬೆಳೆಗಾರರ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರ ವಿರುದ್ಧ ಚೀಟಿನಿಧಿ ಕಂತಿನ ಹಣ ಪಾವತಿ ಮಾಡದ ವ್ಯಕ್ತಿ ಸುಳ್ಳು ದೂರು ದಾಖಲಿಸಿದ್ದು, ಮೊಕದ್ದಮೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಹಕಾರಿ ಮುಖಂಡರು, ಷೇರುದಾರ ಸದಸ್ಯರು, ಠೇವಣಿದಾರರು ಪಟ್ಟಣದಲ್ಲಿ ಮೆರವಣಿಗೆ ಮಂಗಳವಾರ ನಡೆಸಿ ತೀರ್ಥಹಳ್ಳಿ ಠಾಣೆ ಸಿಪಿಐಗೆ ಮನವಿಪತ್ರ ಸಲ್ಲಿಸಿದರು.

ವಾರ್ಷಿಕ ₹ 1,400 ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆಸುವ ರಾಜ್ಯದ ಅತ್ಯುತ್ತಮ ಸಂಸ್ಥೆಯಾಗಿದೆ. ಸಂಘದ ಚೀಟಿನಿಧಿ ಸದಸ್ಯೆ ಅನ್ನಪೂರ್ಣ ಜವಳಿ ₹ 10 ಲಕ್ಷ ಮೌಲ್ಯದ ಚೀಟಿನಿಧಿಯಲ್ಲಿ ₹ 8.70 ಲಕ್ಷ ಪಡೆದು ಕಂತು ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸಂಸ್ಥೆಯ ಹೆಸರಿಗೆ ಅನ್ನಪೂರ್ಣ ಜವಳಿ ಅವರು ನೀಡಿದ ₹ 4,10,567ರ ಚೆಕ್ ಅಮಾನ್ಯಗೊಂಡಿದೆ. ಈ ಎಲ್ಲಾ ವಿಚಾರವನ್ನು ಮರೆ ಮಾಚಿ 2021ರ ಅಕ್ಟೋಬರ್ 17ರಂದು ತೀರ್ಥಹಳ್ಳಿ ಠಾಣೆಯಲ್ಲಿ ಸಹಕಾರ ಸಂಸ್ಥೆ ಅಧ್ಯಕ್ಷ ವಿಜಯದೇವ್ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ, ಸುಳ್ಳು ದೂರು ನೀಡಿರುವ ಅನ್ನಪೂರ್ಣ ಜವಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಾಲ ವಸೂಲಾತಿ ನಿಯಮಾನುಸಾರ ಸಂಸ್ಥೆ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಸಂಸ್ಥೆಯ ವ್ಯವಹಾರದಲ್ಲಿ ಅಧ್ಯಕ್ಷರ ವೈಯಕ್ತಿಕ ತೀರ್ಮಾನಗಳಿಗೆ ಅವಕಾಶ ಇಲ್ಲ. ಷೇರುದಾರರು, ಠೇವಣಿದಾರರು ಸಂಸ್ಥೆ ವಹಿವಾಟಿನ ಮೇಲೆ ನಂಬಿಕೆ ಇಟ್ಟು ವ್ಯವಹರಿಸುತ್ತಿದ್ದಾರೆ. ಸಂಸ್ಥೆಗೆ ಅನ್ನಪೂರ್ಣ ಜವಳಿಯವರು ವಂಚಿಸಿದಂತೆ ಅನೇಕ ಸುಸ್ಥಿದಾರರೂ ವಂಚಿಸುವ ಆತಂಕ ಇದೆ. ಸುಳ್ಳು ದೂರಿಗೆ ಮಾನ್ಯತೆ ದೊರಕಿದರೆ ಸಾಲ ವಸೂಲಾತಿ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ಸಿಪಿಐ ಸಂತೋಷ್ ಕುಮಾರ್ ಜತೆ ಚರ್ಚಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳ ಪ್ರಮುಖರಾದ ಹೆದ್ದೂರು ನಟರಾಜ್, ಸೀಕೆ ಪ್ರಸನ್ನಕುಮಾರ್, ಕೊಡಸಗೊಳ್ಳಿ ಸತೀಶ್, ಕೊಲ್ಲೂರಯ್ಯ, ಹೊರಬೈಲು ರಾಮಕೃಷ್ಣ, ಈಚಲಬೈಲು ಶಶಿಧರ್, ಹಸಿರುಮನೆ ಮಹಾಬಲೇಶ್, ಮಂಗಳಗೋಪಿ, ಶಂಕರಮನೆ ಅರುಣ್, ರೇವತಿ ಅನಂತಮೂರ್ತಿ, ಸರಸ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.