ಶಿವಮೊಗ್ಗ: ಆರ್ಎಸ್ಎಸ್ ದೇಶ ಪ್ರೇಮಿಯನ್ನು ಬೆಳೆಸಿದೆ ವಿನಾ ದೇಶದ ಮೇಲೆ ಬಾಂಬ್ ಹಾಕುವವರನ್ನು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.
ಭಾನುವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳು ತ್ರಿಶೂಲ ಹಂಚಿದ್ದನ್ನು ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ. ತ್ರಿಶೂಲ ಧಾರಣೆ ಆರ್ಎಸ್ಎಸ್ನ ವರ್ಷದ ಕಾರ್ಯಕ್ರಮಗಳಲ್ಲಿ ಒಂದು. ಸಿದ್ದರಾಮಯ್ಯ ಅವರು ತ್ರಿಶೂಲ ಹಂಚಿಕೆ ವಿಚಾರದಲ್ಲಿ ಅನಗತ್ಯ ಪ್ರಸ್ತಾಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಆರ್ಎಸ್ಎಸ್ ವಿರುದ್ಧ ಮಾತನಾಡಿದಷ್ಟೂ ಅಲ್ಪಸಂಖ್ಯಾತರ ಮತ ತಮಗೆ ಬರುತ್ತದೆ ಎಂಬ ಉದ್ದೇಶದಿಂದ ಅವರು ಹಾಗೆ ಮಾತನಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತದೆ. ಅದರ ಆಧಾರದ ಮೇಲೆಯೇ ಚುನಾವಣೆ ನಡೆಯಲಿದೆ’ ಎಂದರು.
ಮೋದಿ ಹಗುರವಾಗಲ್ಲ:‘ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡುವ ಸಿದ್ದರಾಮಯ್ಯ ನಾನು ಏನು ಬೇಕಾದರೂ ಹೇಳಬಹುದು ಎಂದು ಅಂದುಕೊಂಡಿರಬಹುದು. ರಾಜಕಾರಣದಲ್ಲಿ ಹಿರಿಯರಿದ್ದಾರೆ. ಟೀಕೆ ಮಾಡುವಾಗ ಅವರ ಗೌರವ ಎಂತಹದ್ದು ಎಂದು ತಿಳಿದುಕೊಂಡು ಮಾತನಾಡಬೇಕು. ಮೋದಿಯ ಬಗ್ಗೆ ಏನೇ ಮಾತನಾಡಿದರೂ ಮೋದಿ ಹಗುರವಾಗಲ್ಲ. ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರ ಸರ್ಕಾರ ಹೋದ ಮೇಲೆಯೇ ರಾಜ್ಯದಲ್ಲಿ ಒಳ್ಳೆಯ ಆಡಳಿತ ಬಂದಿರುವುದು’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.