ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 13ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಗುರುವಾರ ಅವರ ಸಮಾಧಿ ಸ್ಥಳಕ್ಕೆ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳು ಪಟ್ಟಣದ ಬಂಗಾರ ಧಾಮದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
‘ತಮ್ಮ ಸಾರ್ವಜನಿಕ ಜೀವನದಲ್ಲಿ ಬಡವರ ಬಗ್ಗೆ ಅನುಕಂಪ ಹೊಂದಿದ್ದ ಬಂಗಾರಪ್ಪ ಅವರು ಹಲವು ಯೋಜನೆಗಳನ್ನು ರೂಪಿಸಿ ಅವರ ಆರ್ಥಿಕ ಸಬಲತೆಗೆ ಮುನ್ನುಡಿ ಬರೆದಿದ್ದರು. ಅವರ ಜನಪರ ರಾಜಕಾರಣ ಇಂದಿನ ಯುವ ಸಮುದಾಯಕ್ಕೆ ಆದರ್ಶವಾಗಿದೆ’ ಎಂದು ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಹೇಳಿದರು.
‘ಬಡವರ, ದೀನ ದಲಿತರ, ಶೋಷಿತರ ಧ್ವನಿಯಾಗಿದ್ದ ಬಂಗಾರಪ್ಪ ಅವರು, ನಾಡು ಕಂಡ ಅಪರೂಪದ ರಾಜಕಾರಣಿ. ಅಧಿಕಾರದ ವ್ಯಾಮೋಹದಿಂದ ದೂರ ಉಳಿದು ಎಲ್ಲ ಸಮುದಾಯಗಳಿಗೂ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಜಾತ್ಯತೀತ ನಾಯಕ ಎನಿಸಿಕೊಂಡಿದ್ದರು. ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಅವರು ಇಂದಿನ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಶಿರಸಿ ಶಾಸಕ ಭೀಮಣ್ಣ ನಾಯಕ್ ಬಣ್ಣಿಸಿದರು.
ಸೂರ್ಯ ಮಧು ಬಂಗಾರಪ್ಪ, ಶಿವಮೊಗ್ಗ ಹಾಪ್ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ, ಬಗರ್ಹುಕುಂ ಅಧ್ಯಕ್ಷ ಎಂ.ಡಿ.ಶೇಖರ್, ಎಚ್.ಗಣಪತಿ, ಅಣ್ಣಪ್ಪ ಹಾಲಘಟ್ಟ, ಸುಜಾತಾ ಜೋತಾಡಿ, ನೆಹರೂ ಕೊಡಕಣಿ, ಹಿರಿಯಣ್ಣ ಕಲ್ಲಂಬಿ, ಶ್ರೀಕಾಂತ್ ಚಿಕ್ಕಶಕುನ, ಜೈಶೀಲಗೌಡ, ರತ್ನಮ್ಮ, ಅತಿಕ್, ಸುರೇಶ್ ಬಿಳವಾಣಿ ಸೇರಿ ಬಂಗಾರಪ್ಪ ಅಭಿಮಾನಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.