ADVERTISEMENT

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ಭಾನುಮತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 13:15 IST
Last Updated 4 ನವೆಂಬರ್ 2023, 13:15 IST
<div class="paragraphs"><p>ಮರಿಯೊಂದಿಗೆ&nbsp;ಭಾನುಮತಿ ಆನೆ</p></div>

ಮರಿಯೊಂದಿಗೆ ಭಾನುಮತಿ ಆನೆ

   

ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ಬಿಡಾರದ ಆನೆ ಭಾನುಮತಿ (37) ಶನಿವಾರ ಹೆಣ್ಣು ಮರಿಗೆ ಜನ್ಮನೀಡಿದೆ. ತಾಯಿ–ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮರಿ 70 ಕೆ.ಜಿ ತೂಕ ಇದೆ. ಇದರೊಂದಿಗೆ ಶಿಬಿರದಲ್ಲಿರುವ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಕಳೆದ ಅಕ್ಟೋಬರ್‌ 13ರಂದು 18 ತಿಂಗಳ ಗರ್ಭಿಣಿ ಭಾನುಮತಿ ಬಿಡಾರದಿಂದ ಪಕ್ಕದ ಕಾಡಿಗೆ ಮೇಯಲು ಹೋದಾಗ ಯಾರೋ ಚೂಪಾದ ವಸ್ತುವಿನಿಂದ ಆಕೆಯ ಬಾಲಕ್ಕೆ ಹೊಡೆದಿದ್ದರು. ಇದರಿಂದ ಆಳವಾದ ಗಾಯವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು. ಬಾಲಕ್ಕೆ ಚಿಕಿತ್ಸೆ ನೀಡುವ ಜೊತೆಗೆ ಗರ್ಭಿಣಿ ಆನೆಗೆ ಬಿಡಾರದಲ್ಲಿ ವಿಶೇಷ ಉಪಚಾರ ಮಾಡಲಾಗಿತ್ತು.

ADVERTISEMENT

ಭಾನುಮತಿಯನ್ನು 2014ರಲ್ಲಿ ಸಕಲೇಶಪುರದ ಬಳಿ ಹಿಡಿದು ಸಕ್ರೆಬೈಲಿಗೆ ತರಲಾಗಿತ್ತು. ಆಗಿನಿಂದ ಅದು ಮೂರು ಮರಿಗಳಿಗೆ ಜನ್ಮ ನೀಡಿದೆ. ಹೆರಿಗೆಯ ನಂತರ ಹಾಲುಣಿಸದಿರುವುದು, ಅವಧಿಗೆ ಮುನ್ನ ಹೆರಿಗೆ ಹಾಗೂ ಮರಿಗಳ ದೇಖರೇಕಿ ಮಾಡದ ಕಾರಣ ಹಿಂದಿನ ಮೂರು ಮರಿಗಳು ಸಾವನ್ನಪ್ಪಿದ್ದವು. ’ಈಗಿನ ಮರಿಯ ಬಗ್ಗೆ ಭಾನುಮತಿ ಕಾಳಜಿ ತೋರುತ್ತಿದ್ದಾಳೆ. ಹಾಲು ಕೂಡ ಕುಡಿಸುತ್ತಿದ್ದಾಳೆ‘ ಎಂದು ಆನೆ ಬಿಡಾರದ ಸಿಬ್ಬಂದಿ ’ಪ್ರಜಾವಾಣಿ‘ಯೊಂದಿಗೆ ಸಂತಸ ಹಂಚಿಕೊಂಡರು. ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲಿನಿಂದ ಶಿವಮೊಗ್ಗಕ್ಕೆ ಕರೆತಂದಿದ್ದ ಆನೆ ನೇತ್ರಾವತಿ ವಸವಿ ಶಾಲೆ ಆವರಣದಲ್ಲಿ ಅಕ್ಟೋಬರ್‌ 24ರಂದು ಮರಿ ಹಾಕಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.