ADVERTISEMENT

ತೀರ್ಥಹಳ್ಳಿ: ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹರಿವು

ಮದ್ಯ ಸೇವನೆಗೆ ಅಪ್ರಾಪ್ತರು ಬಲಿ? ಕಣ್ಣುಮುಚ್ಚಿ ಕುಳಿತ ಅಬಕಾರಿ ಇಲಾಖೆ

ನಿರಂಜನ ವಿ.
Published 8 ಫೆಬ್ರುವರಿ 2024, 6:40 IST
Last Updated 8 ಫೆಬ್ರುವರಿ 2024, 6:40 IST
<div class="paragraphs"><p>ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಕ್ರಮ ಮದ್ಯ ಮಾರಾಟದ ಆರೋಪ ಕೇಳಿ ಬರುತ್ತಿರುವ ದೇವಂಗಿ ಮಾನಪ್ಪ ವೃತ್ತ</p></div>

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಕ್ರಮ ಮದ್ಯ ಮಾರಾಟದ ಆರೋಪ ಕೇಳಿ ಬರುತ್ತಿರುವ ದೇವಂಗಿ ಮಾನಪ್ಪ ವೃತ್ತ

   

ತೀರ್ಥಹಳ್ಳಿ: ತಾಲ್ಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಅಪ್ರಾಪ್ತರ ಕೈಗೆ ಮದ್ಯ ಸಲೀಸಾಗಿ ಸಿಗುತ್ತಿದೆ.

18 ವರ್ಷದೊಳಗಿನ ಮಕ್ಕಳು ವಿವಿಧ ದುಶ್ಚಟಗಳ ದಾಸರಾಗುತ್ತಿದ್ದಾರೆ. ಶ್ರಮಿಕ ವರ್ಗದ ಯುವ ಸಮುದಾಯವೇ ಅತಿಯಾಗಿ ವ್ಯಸನಕ್ಕೆ ಬಲಿಯಾಗುತ್ತಿದೆ. ಪೋಷಕರಲ್ಲಿನ ತಿಳಿವಳಿಕೆ ಕೊರತೆ ಜೊತೆಗೆ ಸ್ಥಳೀಯ ವ್ಯವಸ್ಥೆಯಿಂದಾಗಿ ಚಟಗಳಿಗೆ ಸಿಲುಕಿ ಬೆಳೆಯುವ ಮಕ್ಕಳು ಆರಂಭದಲ್ಲೇ ಹಾಳಾಗುತ್ತಿದ್ದಾರೆ.

ADVERTISEMENT

ಅಬಕಾರಿ ಇಲಾಖೆಯಿಂದ ಕ್ಲಬ್‌ (ಸಿಎಲ್‌4), ಹೋಟೆಲ್‌ ಮತ್ತು ಬೋರ್ಡಿಂಗ್‌ (ಸಿಎಲ್‌7), ಬಾರ್‌ ಮತ್ತು ರೆಸ್ಟೋರೆಂಟ್‌ (ಸಿಎಲ್‌9),‌ ಎಂಎಸ್‌ಐಎಲ್ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಇದೆ. ಆದರೆ ಈಗ ಗ್ರಾಮೀಣ ಪ್ರದೇಶದ ಬಹುತೇಕ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಹೀಗಾಗಿ ವಯಸ್ಸಿನ ಅಂತರ ಇಲ್ಲದೆ ಯುವ ಸಮುದಾಯ ಮದ್ಯದ ಚಟಕ್ಕೆ ಬಲಿಯಾಗುತ್ತಿದೆ.

ಕಾಲೇಜು ಜೀವನದಿಂದ ವಿಮುಖರಾಗುವ ಬಹುತೇಕ ವಿದ್ಯಾರ್ಥಿಗಳು ದುಶ್ಚಟಗಳಿಗೆ ಮಾರು ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮೊಟಕುಗೊಳಿಸಿ ಜೀವನಪರ್ಯಂತ ದುಡಿಯುವ ವರ್ಗಗಳಾಗಿ ಮಾರ್ಪಡುತ್ತಿದ್ದಾರೆ.

ಪರಿಶಿಷ್ಟರೇ ಹೆಚ್ಚು

ಮದ್ಯದ ಚಟಕ್ಕೆ ಬಲಿಯಾಗುತ್ತಿರುವವರಲ್ಲಿ ಪರಿಶಿಷ್ಟ ಕುಟುಂಬದ ಯುವಕರೇ ಅತಿ ಹೆಚ್ಚು. ಸರ್ಕಾರ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಜೊತೆಗೆ ಇಂತಹ ತಳ ಸಮುದಾಯದ ಯುವಜನರನ್ನು ಗುರುತಿಸಿ ಅವರಿಗೆ ವೃತ್ತಿ ಕೌಶಲ ತರಬೇತಿ ನೀಡಬೇಕಿದೆ ಎಂದು ಪರಿಶಿಷ್ಟ ಸಮುದಾಯದ ಮುಖಂಡ ಕೀಗಡಿ ಕೃಷ್ಣಮೂರ್ತಿ ಒತ್ತಾಯಿಸುತ್ತಾರೆ.

ಪೂರ್ಣೇಶ್‌ ಕೆಳಕೆರೆ
ಸುಭಾಷ್‌ ದೇವಂಗಿ
ಶ್ರಮಿಕ ವರ್ಗದ ಯುವಕರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬಡತನವನ್ನು ಹತ್ತಿರದಿಂದ ಅನುಭವಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮದ್ಯ ಮಾರಾಟದ ವಿರುದ್ಧ ನಿಗಾ ವಹಿಸಬೇಕು
–ಸುಭಾಷ್‌ ದೇವಂಗಿ ರೈತ ಮುಖಂಡ
ಕಾಸರವಳ್ಳಿ ಶ್ರೀನಿವಾಸ್
ರಾಜ್ಯ ಸರ್ಕಾರವೇ ಟಾರ್ಗೆಟ್‌ ನೀಡಿ ಮದ್ಯ ಸರಬರಾಜು ಮಾಡಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಸುಗಮವಾಗಿ ನಡೆಯುತ್ತಿದೆ. ಕಡಿವಾಣ ಹಾಕದಿದ್ದರೆ ಯುವಕರು ಬಲಿಯಾಗಲಿದ್ದಾರೆ–
ಶ್ರೀನಿವಾಸ ಕಾಸರವಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಹಳ್ಳಿಗಳ ಕುರಿತು ಮಾಹಿತಿ ಸಿಕ್ಕರೆ ಕಡಿವಾಣ ಹಾಕಲಾಗುತ್ತದೆ. ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು
–ಸಂಜೀವ ರೆಡ್ಡಿ ಅಬಕಾರಿ ಡಿವೈಎಸ್ಪಿ ತೀರ್ಥಹಳ್ಳಿ
‘ಅಬಕಾರಿ ಇಲಾಖೆ ಬಂದ್‌ ಆಗಬೇಕು’
‘ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಕ್ರಮದ ರೀತಿ ನಡೆಯುತ್ತಿದೆ. ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಗ್ರಾಮೀಣ ಭಾಗಕ್ಕೆ ಮದ್ಯ ಪೂರೈಕೆಗೆ ನೆರವಾಗುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಇದೆ. ಅಂಗಡಿ ಹೋಟೆಲ್‌ಗಳನ್ನು ಪರಿಶೀಲನೆ ಮಾಡುತ್ತಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿ ನೌಕರರಿಗೆ ಏನೇನೂ ಕೆಲಸ ಇಲ್ಲ. ಕೆಲಸ ಇಲ್ಲದ ಇಲಾಖೆಯನ್ನು ಬಂದ್‌ ಮಾಡಿಸಬೇಕು’ ಎಂದು ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ ನಡೆಸುತ್ತಿರುವ ಪೂರ್ಣೇಶ್‌ ಕೆಳಕೆರೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.