ಶಿವಮೊಗ್ಗ: ಇಲ್ಲಿನ ಕಲ್ಲಹಳ್ಳಿಯ ಪ್ರಿಯದರ್ಶಿನಿ ಶಾಲೆಯಲ್ಲಿ ಶುಕ್ರವಾರ ಸಂಭ್ರಮದ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು.
ಶಾಲೆಯ ಆವರಣದಲ್ಲಿ ರಂಗೋಲಿ ಬಿಡಿಸಿ, ಕಬ್ಬಿನ ಜಲ್ಲೆ ಇಟ್ಟು ಕೊರೊನಾ ನಿಯಮಗಳ ನಡುವೆಯೇ ಸಂಕ್ರಾಂತಿ ಆಚರಿಸಲಾಯಿತು. ಮಕ್ಕಳೆಲ್ಲರೂ ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದರು.
ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ‘ಮಕ್ಕಳು ಕೇವಲ ಅಂಕಗಳಿಗೆ ಮಾತ್ರ ಜೋತು ಬೀಳದೇ ಎಲ್ಲಾ ರೀತಿಯ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂಬ ಕಾರಣ ನಮ್ಮ ಶಾಲೆಯಲ್ಲಿ ಕೆಲವು ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ. ಶಿಕ್ಷಣದ ಜೊತೆಗೆ ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತೇವೆ’ ಎಂದರು.
ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್ ಮಾತನಾಡಿ, ‘ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ನಂಬಿಕೆಯುಳ್ಳ ಈ ಹಬ್ಬದ ಸಾರ್ಥಕತೆಯನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಪಡೆಯುತ್ತಾನೆ. ಆತ ಜಗತ್ತಿನ ಶಕ್ತಿ. ಮಕ್ಕಳು ಕೂಡ ಅಂತಹ ಶಕ್ತಿ ಬೆಳೆಸಿಕೊಳ್ಳಲಿ’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಾಪಕರು ಹಾಗೂ ಪೋಷಕರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.