ಶಿವಮೊಗ್ಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ವಿನಾಯಿತಿ ಅವಧಿಯನ್ನು ಸರ್ಕಾರ ಜುಲೈ 31ರವರೆಗೂ ವಿಸ್ತರಿಸಿದೆ. ಬಡ್ಡಿರಹಿತ ಪಾವತಿಗೆ ಅವಕಾಶ ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್ಡೌನ್ ಪರಿಣಾಮ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಬಹಳಷ್ಟು ಜನರಿಗೆ ದುಡಿಮೆ ಇಲ್ಲವಾಗಿದೆ. ಹಾಗಾಗಿ, ಆಸ್ತಿ ತೆರಿಗೆ ಪಾವತಿ ಮೇಲೆ ಶೇ 5ರಷ್ಟು ರಿಯಾಯಿತಿ ನೀಡಲಾಗಿತ್ತು. ರಿಯಾಯಿತಿ ಸಮೇತ ಪಾವತಿ ಅವಧಿ ಮೇ 31ರವರೆಗೆ ನಿಗದಿ ಮಾಡಲಾಗಿತ್ತು. ಈಗ ಅವಧಿ ವಿಸ್ತರಿಸಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್ ಆದೇಶಿಸಿದ್ದಾರೆ.
ಆಸ್ತಿ ತೆರಿಗೆ ಪಾವತಿ ಸೌಲಭ್ಯದ ಅವಧಿ ವಿಸ್ತರಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಕೆ.ವಿ.ವಸಂತ್ಕುಮಾರ್ ನೇತೃತ್ವದಲ್ಲಿ ಈಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.