ADVERTISEMENT

ಡಿಜಿಟಲ್‌ ಮಾಧ್ಯಮದಲ್ಲಿ ಶಾಂತವೇರಿ ವ್ಯಕ್ತಿತ್ವ ಪರಿಚಯ

‘ಶತಮಾನದ ಶಾಂತವೇರಿ’ ವಿಚಾರಸಂಕಿರಣ ಮತ್ತು ನೆನಪು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:26 IST
Last Updated 5 ಡಿಸೆಂಬರ್ 2022, 4:26 IST
ನಗರದಲ್ಲಿ ಭಾನುವಾರ ನಡೆದ ‘ಶತಮಾನದ ಶಾಂತವೇರಿ ವಿಚಾರ ಸಂಕಿರಣ ಮತ್ತು ನೆನಪು’ ಕಾರ್ಯಕ್ರಮದಲ್ಲಿ (ಎಡದಿಂದ) ಕನ್ನಡ ಪ್ರಾಧ್ಯಾಪಕ ಮತ್ತು ಲೇಖಕ ಡಾ.ಶ್ರೀಪತಿ ಹಳಗುಂದ, ಲೇಖಕ ಪ್ರೊ. ಕಾಳೇಗೌಡ ನಾಗವಾರ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌, ಚಿಂತಕ ಬಂಜಗೆರೆ ಜಯಪ್ರಕಾಶ್ ಮತ್ತು ರಾಮಮನೋಹರ ಶಾಂತವೇರಿ ಇದ್ದರು.  -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ‘ಶತಮಾನದ ಶಾಂತವೇರಿ ವಿಚಾರ ಸಂಕಿರಣ ಮತ್ತು ನೆನಪು’ ಕಾರ್ಯಕ್ರಮದಲ್ಲಿ (ಎಡದಿಂದ) ಕನ್ನಡ ಪ್ರಾಧ್ಯಾಪಕ ಮತ್ತು ಲೇಖಕ ಡಾ.ಶ್ರೀಪತಿ ಹಳಗುಂದ, ಲೇಖಕ ಪ್ರೊ. ಕಾಳೇಗೌಡ ನಾಗವಾರ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌, ಚಿಂತಕ ಬಂಜಗೆರೆ ಜಯಪ್ರಕಾಶ್ ಮತ್ತು ರಾಮಮನೋಹರ ಶಾಂತವೇರಿ ಇದ್ದರು.  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರಳ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವವನ್ನು ಈಗಿನ ಪೀಳಿಗೆಗೆ ಡಿಜಿಟಲ್‌ ಮಾಧ್ಯಮಗಳ ಮೂಲಕ ಪರಿಚಯಿಸುವ ಕಾರ್ಯವನ್ನುಮಲೆನಾಡಿನ ಸಮಾನ ಮನಸ್ಸುಗಳ ಚಿಂತನ ಸಂಗಮ ಕೈಗೊಳ್ಳಲು ನಿರ್ಧರಿಸಿದೆ.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಶತಮಾನದ ಶಾಂತವೇರಿ’ ವಿಚಾರಸಂಕಿರಣ ಮತ್ತು ನೆನಪು ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದಶಾಂತವೇರಿ ಗೋಪಾಲಗೌಡ ಅವರ ಪುತ್ರ ರಾಮಮನೋಹರ ಶಾಂತವೇರಿ ಅವರು, ‘ಸರ್ಕಾರದ ಸಹಯೋಗದಲ್ಲಿ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ, ಯೂಟ್ಯೂಬ್‌ ಮೂಲಕ ಶಾಂತವೇರಿ ಅವರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು’ ಎಂದು ತಿಳಿಸಿದರು.

‘ಶಾಂತವೇರಿ ಗೋಪಾಲಗೌಡರ ಜೀವನದ ಮುಖ್ಯ ಘಟನೆಗಳನ್ನು ಆಯ್ದುಕೊಂಡು ಸಾಕ್ಷ್ಯಚಿತ್ರ ಮಾಡಿ, ಶಾಲಾ-ಕಾಲೇಜುಗಳಲ್ಲಿ ಬಿತ್ತರಿಸುವ ಜತೆಗೆ ಕೈಪಿಡಿ ವಿತರಿಸಲಾಗುವುದು. ಜತೆಗೆ, ವೆಬ್‌ಸೈಟ್‌ ಸಹ ರೂಪಿಸಲು ಉದ್ದೇಶಿಸಲಾಗಿದೆ.ಹಿರಿಯ ರಾಜಕಾರಣಿಗಳಿಗೆ ಅವರ ವ್ಯಕ್ತಿತ್ವ ಚಿರಪರಿಚಿತ. ಆದರೆ, ಇಂದಿನ ವಿದ್ಯಾರ್ಥಿಗಳಿಗೆ ಅಪರಿಚಿತ. ಹೀಗಾಗಿ, ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಂವಿಧಾನದ ಆಶಯ ಮತ್ತು ಶಾಂತವೇರಿ’ ಕುರಿತು ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ, ‘ವಿಧಾನಮಂಡಲ ಅಧಿವೇಶನದಲ್ಲಿ ಕೇವಲ ಭಾವನಾತ್ಮಕ ವಿಷಯಗಳು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ನಿರುದ್ಯೋಗದ ಬದಲಿಗೆ ಲವ್ ಜಿಹಾದ್, ಅನ್ನದ ಬದಲಿಗೆ ಗೋಹತ್ಯೆ ನಿಷೇಧದ ವಿಷಯಗಳು ಚರ್ಚೆಯ ವಸ್ತುಗಳಾಗಿವೆ. ರೈತರ ಆತ್ಮಹತ್ಯೆ, ಕೈಗಾರಿಕಾ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೀಕ್ಷೆಯೊಂದರ ಪ್ರಕಾರ ಸಂಸತ್ತಿನಲ್ಲಿ ಶೇ 88ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಶೇ 43 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇ 56 ಸದಸ್ಯರು ಕುಟುಂಬ ರಾಜಕಾರಣ, ರಿಯಲ್ ಎಸ್ಟೇಟ್ ಹಿನ್ನೆಲೆಯವರು. ಸಂಸತ್‌ ಅಧಿವೇಶನದ ಪ್ರತಿ ನಿಮಿಷಕ್ಕೆ ₹1 ಲಕ್ಷ ಖರ್ಚಾಗುತ್ತದೆ. ವರ್ಷಕ್ಕೆ ಅಂದಾಜು ₹500 ಕೋಟಿ ಖರ್ಚಾಗುತ್ತದೆ. ಆದರೆ, ಅಲ್ಲಿ ಜನರ ಬದುಕಿನ ಬಗ್ಗೆ ಚರ್ಚೆಗಳೇ ನಡೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ‘ನಾಡು ಕಂಡ ಶ್ರೇಷ್ಠ ಹಾಗೂ ಮೌಲ್ಯಾಧಾರಿತ ರಾಜಕಾರಣಿ ಶಾಂತವೇರಿ ಗೋಪಾಲಗೌಡರುಸಮಾಜವಾದದ ಚಿಂತನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು.ಅವರು ರಾಜಕಾರಣಿಗಳಿಗೆ ಮಾದರಿಯಾಗಿದ್ದರು’ ಎಂದು ಸ್ಮರಿಸಿದರು.

ಪ್ರಾಧ್ಯಾಪಕರಾದ ರಾಜಶೇಖರ್‌ ಕಿಗ್ಗ, ಡಾ.ಶ್ರೀಪತಿ ಹಳಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.