
ಶಿವಮೊಗ್ಗ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರ’ ಎಂದು ಶರಾವತಿ ನದಿ ಕಣಿವೆ ಉಳಿಸಿ ಸಮಿತಿ, ಅಭಿಪ್ರಾಯಪಟ್ಟಿದೆ. ಮೊದಲ ಹಂತದಲ್ಲಿ ಯೋಜನೆಯ ವಿರುದ್ಧ ರಾಜ್ಯದಾದ್ಯಂತ ಜನಾಭಿಪ್ರಾಯ ಮೂಡಿಸಲು ಹಾಗೂ 2ನೇ ಹಂತದಲ್ಲಿ ಕಾನೂನು ಹೋರಾಟ ನಡೆಸಲೂ ತೀರ್ಮಾನಿಸಿದೆ.
ಜನಾಭಿಪ್ರಾಯ ರೂಪಿಸಲು ರೈತಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಕನ್ನಡಪರ ಮತ್ತು ಪರಿಸರಾಸಕ್ತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಮಂಗಳವಾರ ಇಲ್ಲಿ ಶರಾವತಿ ನದಿ ಕಣಿವೆ ಉಳಿಸಿ ಸಮಿತಿ ನೇತೃತ್ವದಲ್ಲಿ ನಡೆದ ಪರಿಸರಾಸಕ್ತರ ಹಾಗೂ ಪರಿಸರ ಹೋರಾಟಗಾರರ ದುಂಡುಮೇಜಿನ ಸಭೆಯಲ್ಲಿ ಈ ನಿಲುವು ತಳೆಯಲಾಗಿದೆ.
ಸಭೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ, ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದಿಂದ ತಾತ್ಕಾಲಿಕ ತಡೆ ನೀಡಿರುವ ಸಂದೇಶ ಬಿತ್ತರವಾಗಿದೆ. ಇದು ಪರಿಸರ ಹೋರಾಟಗಾರರ ಸಂಘಟನೆಯನ್ನು ಒಡೆಯುವ ಹಾಗೂ ಸಮಾಜವನ್ನು ದಿಕ್ಕು ತಪ್ಪಿಸುವ ತಂತ್ರ ಎಂದರು.
‘ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ನವೆಂಬರ್ನಲ್ಲಿ ಪರಿಸರ ಅಧ್ಯಯನಕ್ಕೆ ತಜ್ಞರ ನಿಯೋಗವನ್ನು ಕರ್ನಾಟಕಕ್ಕೆ ಕಳುಹಿಸಿ ವರದಿ ಪಡೆದು ನಂತರ ಮುಂದುವರಿಯುವುದಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅಧಿಕೃತವಾಗಿಯೇ ಹೇಳಿದ್ದರು. ಆ ನಿಯೋಗ ಬರುವ ಮುನ್ನವೇ ತಾತ್ಕಾಲಿಕ ತಡೆ ಎಂದು ಹೇಳುತ್ತಿದ್ದಾರೆ. ಈ ತಂತ್ರಕ್ಕೆ ಹೋರಾಟಗಾರರು ತಲೆ ಬಾಗುವುದಿಲ್ಲ’ ಎಂದು ಹೇಳಿದರು.
‘ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿದಂತೆ ಪರಿಸರಕ್ಕೆ ಮಾರಕವಾದ ಯಾವುದೇ ಯೋಜನೆಗಳನ್ನು ಪಶ್ಚಿಮಘಟ್ಟದಲ್ಲಿ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಮ್ಮನ್ನು (ಹೋರಾಟಗಾರರು) ಒಡೆಯುವ ಕೆಲಸ ಬೇಡ ಎಂದು ಸರ್ಕಾರಕ್ಕೆ ಎಚ್ಚರಿಸುತ್ತೇವೆ’ ಎಂದು ಅವರು ತಿಳಿಸಿದರು.
‘ಯೋಜನೆಗಾಗಿ ಅರಣ್ಯ ಭೂಮಿ 54 ಹೆಕ್ಟೇರ್ ಅಲ್ಲ 142.7 ಹೆಕ್ಟೇರ್ ಬಳಕೆ ಆಗುತ್ತಿದೆ. ಸಿಂಹ ಬಾಲದ ಸಿಂಗಳೀಕಗಳ ನೆಲೆಯಲ್ಲಿ ಕ್ವಾರಿಗಳನ್ನು ಬಳಕೆ ಮಾಡಲಾಗುತ್ತಿದೆ. ವಿದ್ಯುತ್ ಪ್ರಸರಣಕ್ಕೆ ಹೆಚ್ಚುವರಿ ಭೂಮಿ ಬೇಕಿದೆ. ಇಷ್ಟೆಲ್ಲ ಸಂಗತಿ ಮುಚ್ಚಿಟ್ಟು ಕೆಪಿಸಿಎಲ್ ಸುಳ್ಳು ಹೇಳುತ್ತಿರುವುದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ನಿಡಸೋಸಿ ಮಠದ ನಿಜಲಿಂಗಾನಂದ ಸ್ವಾಮೀಜಿ, ಮಾಜಿ ಶಾಸಕ ಮಹಿಮ ಪಟೇಲ್, ಕಪತ್ತಗುಡ್ಡದಲ್ಲಿರುವ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಬಂಗಾರುಮಕ್ಕಿ ಮಠದ ಮಾರುತಿ ಗುರೂಜಿ, ಬಸವ ಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ, ಧರ್ಮಗುರು ರೋಷನ್ ಪಿಂಟೋ, ಮುಸ್ಲಿಂ ಸಮುದಾಯದ ಮುಖಂಡ ಅಬ್ದುಲ್ ವಹಾಬ್, ಪರಿಸರವಾದಿಗಳಾದ ಡಾ.ಎಲ್.ಕೆ. ಶ್ರೀಪತಿ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಅಖಿಲೇಶ್ ಚಿಪ್ಪಳಿ, ವಕೀಲ ಕೆ.ಪಿ. ಶ್ರೀಪಾಲ್, ರೈತ ಮುಖಂಡರಾದ ಕೆ.ಟಿ.ಗಂಗಾಧರ್, ದಿನೇಶ್ ಶಿರಿವಾಳ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆಲವರ ಲಾಭಕ್ಕಾಗಿ ಬಹಳಷ್ಟು ಜನರ ಭವಿಷ್ಯ ಬಲಿಕೊಡುವ ಯತ್ನನಡೆಯುತ್ತಿದೆ. ಭವಿಷ್ಯದ ಪೀಳಿಗೆಗೂ ಇಂತಹ ಯೋಜನೆಗಳು ಬೇಡ. ಜನರನ್ನು ಒಗ್ಗೂಡಿಸಿ ಅವರ ನೆರವು ಪಡೆದು ಹೋರಾಟ ರೂಪಿಸಬೇಕಿದೆ.– ಸಂತೋಷ ಹೆಗ್ಡೆ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ
ಪಶ್ಚಿಮಘಟ್ಟವನ್ನೇ ನಾಶ ಮಾಡುವ ಪ್ರಯತ್ನ ಸರ್ಕಾರದಿಂದಲೇ ಆಗುತ್ತಿದೆ. ಸೋಲಾರ್ ಪವನ ವಿದ್ಯುತ್ ಪರ್ಯಾಯ ಇದ್ದರೂ ಪಂಪ್ಡ್ ಯೋಜನೆಗೆ ವೆಚ್ಚ ಮಾಡುತ್ತಿರುವ ₹10474 ಕೋಟಿ ಸಾರ್ವಜನಿಕರ ಹಿತಾಸಕ್ತಿಗೆ ಅಲ್ಲ.– ಗೋಪಾಲಗೌಡ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ
ಅನುಮತಿ ಮುನ್ನವೇ ಟೆಂಡರ್ ಕೊಟ್ಟಿದ್ದು ಹೇಗೆ?
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಮೆಗಾ ಎಂಜಿನಿಯರಿಂಗ್ ಕಂಪೆನಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಬೇರೆ ಬೇರೆ ಇಲಾಖೆಗಳು ಇನ್ನೂ ಅನುಮತಿ ಕೊಟ್ಟಿಲ್ಲ. ಅನುಮತಿಯೇ ಇಲ್ಲದೇ ಹೇಗೆ ಟೆಂಡರ್ ಕರೆದರು’ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.
‘‘ಅವರಿಗೆಲ್ಲ (ಸರ್ಕಾರ) ಮುಂದಿನ ಚುನಾವಣೆಯ ಬಗ್ಗೆ ಆಸಕ್ತಿಯೇ ಹೊರತು ನೆಲದ ಮಕ್ಕಳ ಬಗ್ಗೆ ಅಲ್ಲ. ಇವರು ಇಷ್ಟೊಂದು ಕೃತಜ್ಞಹೀನರು ಆಗುತ್ತಾರೆ ಎಂದು ಭಾವಿಸಿರಲಿಲ್ಲ. ಸೇವೆ ಮಾಡುವ ಜಾಗದಲ್ಲಿ ಸೇವಿಸುತ್ತಿದ್ದಾರೆ. ಸಂಪದ್ಭರಿತ ಸುಸಂಸ್ಕೃತ ರಾಜ್ಯ ಕರ್ನಾಟಕ ಅಸಂಸ್ಕೃತರ ಕೈಗೆ ಸಿಕ್ಕು ಸಂಕಷ್ಟಕ್ಕೆ ಒಳಗಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
21 ಲಕ್ಷ ಮರಗಳ ಹನನಕ್ಕೆ ಸಿದ್ಧತೆ; ಮಾರುತಿ ಗುರೂಜಿ
‘ಯೋಜನೆಗೆ 16000 ಮರಗಳನ್ನು ಕಡಿಯಲಾಗುತ್ತಿದೆ ಎಂದು ಕೆಪಿಸಿಎಲ್ ಹೇಳುತ್ತಿದೆ. ಆದರೆ ಅರಣ್ಯ ಇಲಾಖೆಯ ಪರಿವೇಶ್ ಪೋರ್ಟಲ್ನಲ್ಲಿ 1.20 ಲಕ್ಷ ಮರಗಳು ಎಂಬ ಉಲ್ಲೇಖವಿದೆ. ಇನ್ನು ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒಯ್ಯಲು 2 ಲಕ್ಷ ಮರಗಳನ್ನು ಕಡಿಯುವ ಪ್ರಸ್ತಾವ ಇದೆ. ಪಂಪ್ಡ್ ಸ್ಟೋರೇಜ್ ಸೇರಿದಂತೆ ಶರಾವತಿ ಕಣಿವೆಯಲ್ಲಿ 12 ಬೇರೆ ಬೇರೆ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ ನಡೆದಿದ್ದು 21 ಲಕ್ಷ ಮರಗಳ ಕಡಿಯುವ ಯೋಜನೆ ಇದೆ. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಹೆಚ್ಚು ಬೆಳಕು ಚೆಲ್ಲಬೇಕಿದೆ’ ಎಂದು ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.