ಆನವಟ್ಟಿ: ಹಾನಗಲ್ನಿಂದ ಮೈಸೂರಿಗೆ ಹೋಗುವ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಆನವಟ್ಟಿ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ನಿಧಾನವಾಗಿ ಚಲಿಸುತ್ತಾ ಹೋಗುತ್ತಿದ್ದು, ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಓಡೋಡಿ ಹೋಗಿ ಬಸ್ ಹತ್ತುವಾಗ ಒಬ್ಬ ಮಹಿಳೆ ಹಾಗೂ ವಿದ್ಯಾರ್ಥಿ ಕಾಲು ಜಾರಿ ಬೀಳುವ ಹೊತ್ತಿಗೆ ಬಸ್ನಲ್ಲಿ ಇದ್ದ ವಿದ್ಯಾರ್ಥಿಗಳು ಕೈ ಹಿಡಿದು ಎಳೆದುಕೊಂಡಿದ್ದರಿಂದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಈ ದೃಶ್ಯವನ್ನು ಕಂಡ ಸಾರ್ವಜನಿಕರು ತಕ್ಷಣವೇ ದ್ವಿಚಕ್ರ ವಾಹನದಲ್ಲಿ ತೆರಳಿ ನೃಪತುಂಗ ಶಾಲೆ ಬಳಿ ಸರ್ಕಾರಿ ಬಸ್ ತಡೆದು, ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಹತ್ತಿಸಿಕೊಂಡು ಹೋಗಿ ಎಂದು ಹೇಳಿದ್ದಾರೆ. ಬಸ್ನ ಡೈವರ್ ಬಸ್ ಪೂರ್ತಿ ತುಂಬಿತ್ತು ಹಾಗಾಗಿ ನಿಲ್ಲಿಸಲಿಲ್ಲ ಎಂಬ ಉತ್ತರ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಸಂದೀಪ, ಪುಂಡಲೀಕ್, ಜನದನಿ ಸೇವಾ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ್ ಕುಮಾರ್ ‘ಹಲವು ಬಾರಿ ನಿಮಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತೆ ಹೇಳಿದ್ದರೂ ನಿಲ್ಲಿಸುತ್ತಿಲ್ಲ. ಪ್ರಯಾಣಿಕರು ಹೆಚ್ಚಾಗಿದ್ದರೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಇಳಿಸುವವರನ್ನು ಇಳಿಸಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಹತ್ತಿಸಿಕೊಂಡು ಕಂಡಕ್ಟರ್ ಬಸ್ನ ಬಾಗಿಲನ್ನು ಮುಚ್ಚಿಕೊಂಡು ಹೋಗಿ, ಇಂದು ನಿಮ್ಮ ಕರ್ತವ್ಯ ಒಂದು ವೇಳೆ ಬಾಗಿಲು ತೆರೆದಿದೆ ಎಂದು ವಿದ್ಯಾರ್ಥಿಗಳು ಓಡಿ ಬಂದು ಹತ್ತುವಾಗ ಬಿದ್ದು ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ’ ಎಂದು ತರಾಟೆಗೆ ತೆಗೆದುಕೊಂಡರು.
ತಮ್ಮದೇ ಸರಿಯನ್ನುವಂತೆ ಸಾರ್ವಜನಿಕರೊಂದಿಗೆ ವಾಗ್ವಾದ ಮಾಡಿದ ಡೈವರ್ ಹಾಗೂ ಕಂಡಕ್ಟರ್ ನಡು ರಸ್ತೆಯಲ್ಲೇ ಬಸ್ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಸೃಷ್ಟಿಸಿದರು. ಕೊನೆಗೆ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದ ಮೇಲೆ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ.
ಸ್ಥಳದಲ್ಲಿ ಇದ್ದ ಕರ್ನಾಟಕ ರಾಜ್ಯ ಗೆಳೆಯರ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ್ ಎಂ. ದೊಡ್ಡಮನಿ ಮಾತನಾಡಿ, ‘ಮೈಸೂರು ಹೋಗುವ ಸರ್ಕಾರಿ ಬಸ್ ಸಮಯಕ್ಕೆ ಶಿಕಾರಿಪುರ, ಶಿವಮೊಗ್ಗಕ್ಕೆ ಶಾಲಾ –ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ಹೋಗುವ ಪ್ರಯಾಣಿಕರು ಹೆಚ್ಚಿದ್ದು, ಪ್ರತಿದಿನ ಬಸ್ನಲ್ಲಿ ನೂಕುನುಗ್ಗಲು ಆಗುತ್ತದೆ. ಹಾಗಾಗಿ ಈ ಬಸ್ ಹೊರಡುವ 5 ನಿಮಿಷ ಮುಂಚೆ ಅಥವಾ ನಂತರ ಇನ್ನೊಂದು ಸರ್ಕಾರಿ ಬಸ್ ಶಿವಮೊಗ್ಗಕ್ಕೆ ಬಿಡಿ’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.