
ಶಿರಾಳಕೊಪ್ಪ (ಶಿಕಾರಿಪುರ): ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕ ವತಿಯಿಂದ ಮಂಗಳವಾರ ಪಟ್ಟಣದ ಕದಂಬ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.ರತ್ನಮ್ಮ ಈಸಳೂರು, ದಿ.ಹಾಲಪ್ಪ ಇಸಳೂರು ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
‘ಕನ್ನಡ ನಾಡು ನುಡಿಯ ಅಭಿವೃದ್ಧಿಗೆ ನೂರಾರು ಜನರು ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ವಚನಕಾರರು ಸರಳ ಭಾಷೆ ಮೂಲಕ ಮಹತ್ವದ ವಿಷಯ ತಿಳಿಸುವ ಮೂಲಕ ನಾಡಿನಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜಾಶ್ರಯದ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದರೆ ಕವಿಗಳು, ಸಾಹಿತಿಗಳು, ಕಲಾವಿದರು ಇಲ್ಲಿನ ಸೊಬಗು ಪಸರಿಸುವ ಕೆಲಸ ಮಾಡಿದ್ದಾರೆ’ ಎಂದು ಕಸಾಪ ಕಾರ್ಯದರ್ಶಿ ಲತಾ ಯೋಗಿರಾಜ್ ಹೇಳಿದರು.
‘ಕಸಾಪ ಯೋಜಿಸಿರುವ ದತ್ತಿ ಉಪನ್ಯಾಸದ ಮೂಲಕ ಕನ್ನಡದ ಹಿರಿಮೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗುತ್ತಿದೆ. ಈ ನಿಟ್ಟಿನಲ್ಲಿ ದತ್ತಿ ದಾನಿಗಳೂ ಸ್ಮರಣೀಯ ಕೊಡುಗೆ ನೀಡಿದಂತೆ ಆಗುತ್ತದೆ. ಕಸಾಪ ಮಾತ್ರವಲ್ಲ ಕನ್ನಡಪರ ಸಂಘಟನೆಗಳೂ ಸಾಹಿತ್ಯ, ಸಂಸ್ಕೃತಿಯನ್ನು ಯುವಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಪ್ರಾಂಶುಪಾಲ ಬಿ.ಎಚ್.ಯುವರಾಜ್ ಹೇಳಿದರು.
ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಟಿ.ಎಂ.ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಜೇಂದ್ರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಎಸ್.ಯುವರಾಜ್, ಪ್ರತಿಮಾ ಇಸಳೂರು, ಉಮೇಶ್ ಇಸಳೂರು, ರೇಣುಕಯ್ಯಸ್ವಾಮಿ, ಡಾ.ಮಲ್ಲನಗೌಡ ಇದ್ದರು. ಎನ್.ಆರ್.ರಾಘವೇಂದ್ರ ನಿರೂಪಿಸಿ, ವಸುಮತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.