ಶಿವಮೊಗ್ಗ: ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16205) ರೈಲಿನ ಬೋಗಿಗಳ ನಡುವಿನ ಸಂಪರ್ಕ ಕೊಂಡಿ (ಅನ್ ಕಪ್ಲಿಂಗ್) ಬುಧವಾರ ಸಂಜೆ ಇಲ್ಲಿನ ತುಂಗಾ ನದಿ ಸೇತುವೆ ಮೇಲೆ ತುಂಡಾಗಿ ಕಳಚಿದ್ದರಿಂದ ಆತಂಕ ಉಂಟಾಗಿತ್ತು.
ಸಂಜೆ 5 ಗಂಟೆಗೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಟ ರೈಲು, ಗುಂಡಪ್ಪ ಶೆಡ್–ಸ್ಯಾಂಡಲ್ ಫ್ಯಾಕ್ಟರಿ ನಡುವಿನ ತುಂಗಾ ನದಿ ಸೇತುವೆಯ ಮೇಲೆ ತೆರಳುತ್ತಿದ್ದ ವೇಳೆ 16 ಬೋಗಿಗಳ ಪೈಕಿ ಆರು ಬೋಗಿ (ಕೋಚ್) ಬೇರೆಯಾಗಿವೆ. ಗಾರ್ಡ್ ಕಂಪಾರ್ಟ್ಮೆಂಟ್ ಒಳಗೊಂಡ ಆರು ಬೋಗಿಗಳು ತುಂಗಾ ನದಿ ಸೇತುವೆ ಏರುವ ಮೊದಲೇ ಕಳಚಿಕೊಂಡು ನಿಂತಿವೆ. 10 ಬೋಗಿಗಳನ್ನು ಒಳಗೊಂಡ ಎಂಜಿನ್ ಸೇತುವೆ ಮೇಲೆ ನಿಂತಿದೆ. ಸ್ವಲ್ಪ ದೂರ ತೆರಳಿದ ನಂತರ ಇದನ್ನು ಗಮನಿಸಿದ ಲೋಕೊಪೈಲಟ್ ರೈಲು ನಿಲ್ಲಿಸಿದ್ದಾರೆ. ವಿಷಯ ತಿಳಿದು ರೈಲ್ವೆ ಎಂಜಿನಿಯರಿಂಗ್ ವಿಭಾಗದ ತಂತ್ರಜ್ಞರು ಸ್ಥಳಕ್ಕೆ ಧಾವಿಸಿದ್ದು ಸಂಪರ್ಕ ಕಳಚಿಕೊಂಡಿದ್ದ ಆರು ಬೋಗಿಗಳನ್ನು ಮರು ಜೋಡಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.