ಶಿವಮೊಗ್ಗ: ಐಪಿಎಲ್ ಪಂದ್ಯಾವಳಿಯ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಗೆಲುವು ಸಾಧಿಸಿ ಕಪ್ ಮುಡಿಗೇರಿಸಿಕೊಂಡ ಮಂಗಳವಾರ ತಡರಾತ್ರಿ ಜಿಲ್ಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಅಭಿಮಾನಿಗಳು ತೋರಿದ್ದ ಉನ್ಮಾದಕ್ಕೆ ‘ಮದ್ಯದ ಕಿಕ್’ ಹೆಚ್ಚಿನ ಸಾಥ್ ನೀಡಿದೆ.
ಅಂದು ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿದೆ. ಹೊಸ ವರ್ಷದ ಸಂಭ್ರಮಾಚರಣೆಯ (2024ರ ಡಿಸೆಂಬರ್ 31) ನಂತರ ಮೊದಲ ಬಾರಿಗೆ ಅಂದು ಅತಿಹೆಚ್ಚು ಮದ್ಯ ಮಾರಾಟವಾಗಿದ್ದು ದಾಖಲೆ ಬರೆದಿದೆ.
ಮದ್ಯ ದುಪ್ಪಟ್ಟು ಮಾರಾಟ: ಐಪಿಎಲ್ ಫೈನಲ್ ಪಂದ್ಯಾವಳಿ ನಡೆದ ಜೂನ್ 3ರಂದು 5,429 ಬಾಕ್ಸ್ ಐಎಂಎಲ್ ಮದ್ಯ (ವಿಸ್ಕಿ, ರಮ್, ಬ್ರಾಂಡಿ, ಜಿನ್ ಸೇರಿದಂತೆ ಬೇರೆ ಬೇರೆ ಮದ್ಯ) ಹಾಗೂ 4,093 ಬಾಕ್ಸ್ ಬಿಯರ್ ಜಿಲ್ಲೆಯಲ್ಲಿ ಕೆಎಸ್ಬಿಸಿಎಲ್ನ ಮೂರು ಡಿಪೋಗಳಿಂದ ಖರೀದಿಸಲಾಗಿದೆ. ಐಪಿಎಲ್ ಫೈನಲ್ ಪಂದ್ಯಾವಳಿಯ ಹಿಂದಿನ ದಿನ (ಜೂನ್ 2) 3,647 ಬಾಕ್ಸ್ ಐಎಂಎಲ್ ಮದ್ಯ ಹಾಗೂ 1,985 ಬಾಕ್ಸ್ ಬಿಯರ್ ಖರೀದಿಯಾಗಿದೆ. ಜೂನ್ 4ರಂದು 3,708 ಬಾಕ್ಸ್ ಐಎಂಎಲ್ ಮದ್ಯ, 2,407 ಬಾಕ್ಸ್ ಬಿಯರ್ ಹಾಗೂ ಜೂನ್ 5ರಂದು 3,934 ಬಾಕ್ಸ್ ಐಎಂಎಲ್ ಹಾಗೂ 2,910 ಬಾಕ್ಸ್ ಬಿಯರ್ ಖರೀದಿಯಾಗಿದೆ. ಬೇರೆ ದಿನಗಳಿಗಿಂತ ಮದ್ಯ ಮಾರಾಟ ಫೈನಲ್ ದಿನ ದುಪ್ಪಟ್ಟು ಆಗಿದ್ದು, ಸಂಭ್ರಮಾಚರಣೆ ವಿಸ್ತರಣೆಗೊಂಡಿದ್ದು, ನಂತರದ ಎರಡು ದಿನವೂ ವಾಡಿಕೆಗಿಂತ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ಶಿವಮೊಗ್ಗದ ಅಬಕಾರಿ ಇಲಾಖೆ ಮೂಲಗಳು ಹೇಳುತ್ತವೆ.
ಜೀವ ಬಲಿ ಪಡೆದಿದ್ದ ವಿಜಯೋತ್ಸವ: ಮದ್ಯದ ಅಮಲು ಅಂದು ವಿಜಯೋತ್ಸವದಲ್ಲಿ ಕ್ರಿಕೆಟ್ ಅಭಿಮಾನಿಗಳ ಉನ್ಮಾದಕ್ಕೂ ಕಾರಣವಾಗಿದ್ದು, ಗೋಪಿ ವೃತ್ತದಲ್ಲಿ ಅತಿರೇಕದ ವರ್ತನೆಗೂ ಮುನ್ನುಡಿ ಬರೆದಿತ್ತು. ರಸ್ತೆಯಲ್ಲಿ ಓಡಾಡುವ ಬಸ್, ಲಾರಿಗಳ ಮೇಲೆ ಹತ್ತಿ, ಕಟ್ಟಡ, ರಸ್ತೆ ವಿಭಜಕ, ಕಂಬ, ಮರ ಹತ್ತಿ ಕುಳಿತು ಅಪಾಯಕಾರಿಯಾಗಿ ವರ್ತಿಸಿದ್ದು, ಬೈಕ್ ವ್ಹೀಲಿಂಗ್ಗೆ ಒಂದು ಜೀವ ಕೂಡ ಬಲಿಯಾಗಿತ್ತು. ಜೊತೆಗೆ ರಸ್ತೆಯ ಪಕ್ಕ ನಿಲ್ಲಿಸಿದ್ದ ಕಾರುಗಳು ಜಖಂಗೊಂಡಿದ್ದವು. ಅಮಲಿನಲ್ಲಿದ್ದ ಕೆಲವರು ಪೆಟ್ರೋಲ್ ಬಂಕ್ವೊಂದರ ಮುಂದೆ ಗಲಾಟೆ ಕೂಡ ಮಾಡಿದ್ದರು. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರಸ್ತೆಗಿಳಿದವರನ್ನು ಚದುರಿಸಿದ್ದರು.
ಅಮಲು, ಯುವಜನರೇ ಹೆಚ್ಚು: ಅಂದು ಆರ್ಸಿಬಿ ಗೆಲುವಿನ ವಿಜಯೋತ್ಸವದಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಹೆಚ್ಚಿನವರು ಮದ್ಯ ಸೇವಿಸಿದ್ದರು. ಇದು ಕಳವಳಕಾರಿ ಸಂಗತಿ ಎಂದು ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಐಪಿಎಲ್ ಕ್ರೀಡಾ ಸ್ಫೂರ್ತಿಯ ಜೊತೆಗೆ ಬೆಟ್ಟಿಂಗ್, ಮದ್ಯಸೇವನೆಗೆ ಉತ್ತೇಜನದಂತಹ ಮತ್ತೊಂದು ಮುಖವನ್ನು ಹೊಂದಿದೆ. ಹೀಗಾಗಿ ಪಾಲಕರು ಮಕ್ಕಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು. ಅವರ ಸ್ನೇಹಿತರ ಕೂಟ, ಚಟುವಟಿಕೆ ಹಾಗೂ ಹೊರಗಿನ ಸಂಪರ್ಕಗಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡುತ್ತಾರೆ.
ಸಂಭ್ರಮಿಸಲು ಮದ್ಯಸೇವನೆಯೊಂದೇ ದಾರಿಯಲ್ಲ
ಎಲ್ಲ ದುಃಖ ಹಾಗೂ ಸಂಭ್ರಮಾಚರಣೆಗಳಿಗೂ ಮದ್ಯ ಸೇವನೆಯೇ ಪರಿಹಾರ ಎಂಬ ಭಾವ ಇಂದಿನ ಯುವಸಮೂಹದಲ್ಲಿ ಬೆಳೆಯುತ್ತಿದೆ. ಇದು ಅಡಿಕ್ಷನ್ಗೆ ಮೂಲವಾಗುತ್ತಿದೆ. ದುಡುಕಿನ ವರ್ತನೆಗಳು ಹೆಚ್ಚುತ್ತಿವೆ. ಅದು ಮೊನ್ನಿನ ಆರ್ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆಯೂ ಕಂಡುಬಂದಿತು ಎಂದು ಶಿವಮೊಗ್ಗದ ಕಟೀಲು ಅಶೋಕ ಪೈ ಕಾಲೇಜಿನ ಪ್ರಾಚಾರ್ಯರೂ ಆದ ಮನಶಾಸ್ತ್ರಜ್ಞೆ ಪ್ರೊ.ಸಂಧ್ಯಾ ಕಾವೇರಿ ಹೇಳುತ್ತಾರೆ. ಬೇಜಾರು ಖುಷಿಗೆ ಮದ್ಯಕ್ಕೆ ಪರ್ಯಾಯ ರಚನಾತ್ಮಕ ಹಾಗೂ ಸೃಜನಶೀಲ ಚಟುವಟಿಕೆ ಹಾಗೂ ಕೌಶಲಗಳಲ್ಲಿ ತೊಡಗಿಕೊಂಡು ಯುವಸಮೂಹ ಮಾನಸಿಕ ಸಂತೋಷ ಸಾಮಾಜಿಕ ಆರೋಗ್ಯ ಒಂದಕ್ಕೊಂದು ಪೂರಕವಾಗುವಂತೆ ನೋಡಿಕೊಳ್ಳಬೇಕಿದೆ ಎನ್ನುತ್ತಾರೆ. ಪಾಲಕರಲ್ಲೂ ಮಕ್ಕಳೊಂದಿಗೆ ಸ್ನೇಹ ಸಂವಹನ ಕಡಿಮೆ ಆಗುತ್ತಿದೆ. ಪರಸ್ಪರ ಸಂವಾದದ ಕೊರತೆ ಇರುವುದರಿಂದ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತಿದೆ. ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಸಂವಹನ ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಸಲಹೆ ನೀಡುತ್ತಾರೆ.
ಮದ್ಯಸೇವನೆ: ಅಬಕಾರಿ ಇಲಾಖೆಯಿಂದಲೂ ಜಾಗೃತಿ
‘ಯುವಜನರಲ್ಲಿ ಮದ್ಯ ಹಾಗೂ ಗಾಂಜಾ ಸೇವನೆ ಹೆಚ್ಚುತ್ತಿರುವುದನ್ನು ಅಬಕಾರಿ ಇಲಾಖೆಯೂ ಗಂಭೀರವಾಗಿ ಪರಿಗಣಿಸಿದೆ. ಗ್ರಾಮ ಹಾಗೂ ವಾರ್ಡ್ ಸಭೆ ನಡೆಸಿ ಹಾಗೂ ಶಾಲೆ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಂಡು ವಿದ್ಯಾರ್ಥಿಗಳಲ್ಲಿ ಮದ್ಯಸೇವನೆಯ ವಿರುದ್ಧ ಅರಿವು ಮೂಡಿಸುತ್ತಿದ್ದೇವೆ’ ಎಂದು ಶಿವಮೊಗ್ಗದ ಅಬಕಾರಿ ಅಧಿಕಾರಿ ಪುರುಷೋತ್ತಮ್ ಹೇಳುತ್ತಾರೆ. ‘18 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸನ್ನದುದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಜೊತೆಗೆ ಅಂಥದ್ದು ಕಂಡುಬಂದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಕಳೆದೊಂದು ವರ್ಷದ ಅವಧಿಯಲ್ಲಿ 71 ಗಾಂಜಾ ಪ್ರಕರಣಗಳನ್ನು ದಾಖಲಿಸಿದ್ದೇವೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.