ರಿಪ್ಪನ್ಪೇಟೆ: ಪಟ್ಟಣದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ 57 ನೇ ವರ್ಷದ ಗಣಪನ ವಿಸರ್ಜನ ಮೆರವಣಿಗೆ ಮಂಗಳವಾರ ಆರಂಭವಾಯಿತು.
ರಾತ್ರಿಯೂ ಮುಂದುವರೆದಿತ್ತು. ನಂತರದಲ್ಲಿ ತೀರ್ಥ ಪ್ರಸಾದ ಅನ್ನಸಂತರ್ಪಣೆ ಜರುಗಿತು.
ಮಧ್ಯಾಹ್ನ 3 ಗಂಟೆಗೆ ಹಿಂದೂ ಸಂಘಟನೆಗಳ ಯುವಕರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಸಂಜೆ 5 ಕ್ಕೆ ತಿಲಕ್ ಮಹಾಮಂಟಪದಿಂದ ತೆರೆದ ವಾಹನದಲ್ಲಿ ಶೋಭಾಯಾತ್ರೆ ಹೊರಟಿತು.
ಗಣಪನ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆಯಲಿದ್ದು, ಶಿವಮೊಗ್ಗ -ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ರಸ್ತೆಯ ಮೂಲಕ ಮೆರವಣಿಗೆ ತೆರಳಲಿದೆ. ಗೌವಟೂರಿನ ತಾವರೆಕೆರೆ ಯಲ್ಲಿ ಬುಧವಾರ ಗಣಪತಿ ವಿಸರ್ಜನೆ ನಡೆಯಲಿದೆ.
ಶಿರಸಿಯ ವೀರಭದ್ರಗಲ್ಲಿ ಗೆಳೆಯರ ಬಳಗದ ಕಾಡುಗೊಲ್ಲರ ಕುಣಿತ, ಭದ್ರಾವತಿ ಅರಕೆರೆಯ ವೀರಗಾಸೆ, ಶಿಗ್ಗಾವಿಯ ಜಾಂಜ್ ಪತಾಕ್, ಕೇರಳದ ಗೊಂಬೆ ಕುಣಿತ, ಡೊಳ್ಳು ಕುಣಿತ, ತಟ್ಟಿರಾಯ, ಕೋಲಾಟ, ಭಜನೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು.
ಮೆರವಣಿಗೆ ಸಾಗುವ ಮಾರ್ಗವನ್ನು ಉದ್ದಕ್ಕೂ ಸ್ಥಳೀಯರು ತಳಿರು ತೋರಣಗಳಿಂದ ಅಲಂಕರಿಸಿದ್ದರು.
ಬಾನಂಗಳದಲ್ಲಿ ರಂಗು ರಂಗಿನ ಸಿಡಿಮದ್ದುಗಳ ಚಿತ್ತಾರ ಭಕ್ತರ ಕಣ್ಮನ ಸೆಳೆದವು. ವಿನಾಯಕ ವೃತ್ತದಲ್ಲಿ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದವರು ಗಣಪನಿಗೆ ಮಾಲಾರ್ಪಣೆ ಮಾಡಿ ಸಾಮರಸ್ಯ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.