ಶಿವಮೊಗ್ಗದ ಫ್ರೀಡಂ ಪಾರ್ಕ್ ಎದುರು ಬುಧವಾರ ಸಂಚಾರ ಠಾಣೆ ಪೊಲೀಸರ ಭೇಟಿ ಮಾಡಿದ ಸವಾರರು ತಮ್ಮ ವಾಹನಗಳಿಗೆ ದಂಡ ವಿಧಿಸಲಾಗಿದೆಯೇ ಎಂಬುದರ ಮಾಹಿತಿ ಪಡೆದರು.
ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಪಾವತಿಗೆ ಸರ್ಕಾರ ಕೊಟ್ಟಿರುವ ಶೇ 50 ರಿಯಾಯಿತಿ ದರದ ಅವಕಾಶಕ್ಕೆ ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ಆಗಸ್ಟ್ 23ರಿಂದ ಸೆಪ್ಟೆಂಬರ್ 9ರವರೆಗೆ ಜಿಲ್ಲೆಯಲ್ಲಿ ವಾಹನ ಸವಾರರು 26,728 ಪ್ರಕರಣಗಳನ್ನು ಒಟ್ಟು ₹1,09,70,250 ದಂಡ ಪಾವತಿಸಿ ಇತ್ಯರ್ಥಪಡಿಸಿಕೊಂಡಿದ್ದಾರೆ.
ಶೇ 50ರ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸೆ.12 ಕೊನೆಯ ದಿನವಾಗಿದೆ.
ಹತ್ತಿರದ ಪೊಲೀಸ್ ಠಾಣೆ, ಸಂಚಾರ ಠಾಣೆಯ ಪೊಲೀಸರ ಬಳಿಯೂ ದಂಡ ಪಾವತಿಗ ಅವಕಾಶ ಇರುವುದರಿಂದ ಬುಧವಾರ ಶಿವಮೊಗ್ಗದಲ್ಲಿ ವಾಹನ ಸವಾರರು ಸರದಿಯಲ್ಲಿ ದಂಡ ಪಾವತಿಸಿದರು.
2023ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ₹19 ಕೋಟಿಗೂ ಹೆಚ್ಚು ದಂಡದ ಮೊತ್ತ ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಂದ ಪಾವತಿಯಾಗಬೇಕಿದೆ. ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಕೊನೆಯ ಎರಡು ದಿನಗಳು ಬಾಕಿ ಇರುವುದರಿಂದ ವಾಹನ ಸವಾರರು ಸಂಚಾರ ಠಾಣೆ ಪೊಲೀಸರನ್ನು ಹುಡುಕುವುದು ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.