ADVERTISEMENT

ಶಿವಮೊಗ್ಗ: ವಿದ್ಯಾಗಮದಿಂದ ವೈರಸ್‌ ಹೆಚ್ಚು -ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 10:37 IST
Last Updated 10 ಅಕ್ಟೋಬರ್ 2020, 10:37 IST

ಶಿವಮೊಗ್ಗ: ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು ಎಂದು ವಿರೋಧ ವ್ಯಕ್ತವಾಗಿತ್ತು. ಈಗ ವಿದ್ಯಾಗಮದಿಂದ ವೈರಸ್‌ ಹೆಚ್ಚು ಹರಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರಕ್ಕೆ ಶಾಲೆ ಆರಂಭಿಸುವ, ವಿದ್ಯಾಗಮ ಮುಂದುವರಿಸುವ ಹಠವಿಲ್ಲ ಎಂದು ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಶಾಲೆ ಆರಂಭಿಸಿದರೆ, ವಿದ್ಯಾಗಮ ಮುಂದುವರಿಸಿದರೆ ಕೊರೊನಾ ಹೆಚ್ಚಾಗುತ್ತದೆಯೇ? ವಿದ್ಯಾಗಮದಿಂದ ಎಷ್ಟು ಜನರಿಗೆ ಸೋಂಕು ತಗುಲಿದೆ. ವಿದ್ಯಾಗಮದಿಂದಲೇ ಹರಡುತ್ತಿದೆಯಾ ಎಂಬ ವಿಷಯವನ್ನು ಶಿಕ್ಷಣ ಸಚಿವರು ನೀಡಲಿದ್ದಾರೆ. ಅಂಕಿ,ಅಂಶ ನೋಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ADVERTISEMENT

ಎರಡು ದಿನಗಳಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟ:

ಎರಡು ದಿನಗಳಲ್ಲಿ ಶಿರಾ ಮತ್ತು ಆರ್.ಆರ್.ನಗರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು. ಅಭ್ಯರ್ಥಿಗಳ ನೇಮಕಕ್ಕೆ ಅ.16ವರೆಗೂ ಅವಕಾಶವಿದೆ. ಎರಡೂ ಕ್ಷೇತ್ರದಲ್ಲಿ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣೆ ಉಸ್ತುವರಿಗಳನ್ನು ನೇಮಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಈಗಾಗಲೇ ಪ್ರವಾಸ ಮುಗಿಸಿದ್ದಾರೆ ಎಂದರು.

ಬಿಜೆಪಿ ದ್ವೇಷದ ರಾಜಕಾರಣ‌ ನಡೆಸುತ್ತಿದೆ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ದೂರುತ್ತಿವೆ. ‘ತಾನು ಕಳ್ಳ ಪರರ ನಂಬ’ ಎಂಬ ಮಾತಿನಂತೆ ಆರೋಪಿಸುತ್ತಿವೆ. ಯಾವುದೇ ಪಕ್ಷದ ಅಭ್ಯರ್ಥಿಗಳು ಪೂರ್ವಗ್ರಹ ಪೀಡಿತರಾಗಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷ, ಅಭ್ಯರ್ಥಿಗಳು ಚಟುವಟಿಕೆಯಿಂದ ಜನರ ಜತೆ ಕೆಲಸ ಮಾಡಿದರೆ ಗೆಲುವು ಸಾಧ್ಯ. ಬಿಜೆಪಿ ಎರಡೂ ಕ್ಷೇತ್ರ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.