
ಶಿವಮೊಗ್ಗ: ಜಗತ್ತಿನ ತಲ್ಲಣಗಳಿಗೆ ಕುವೆಂಪು ಅವರ ವಿಶ್ವಮಾನವ ಸಂದೇಶವೇ ಪರಿಹಾರ ಎಂದು ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಕರ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನದ ದಿನಾಚರಣೆ, ಪ್ರೊ. ಸತ್ಯನಾರಾಯಣ ಅವರ ಚುಟುಕು ಸಂಕಲನ ಬಿಡುಗಡೆ, ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಸಾಹಿತ್ಯ ಲೋಕದ ಗೌರಿಶಂಕರ, ಅವರ ಕೃತಿಗಳು ಎತ್ತರ ಬಿತ್ತರ ಮತ್ತು ಮಹತ್ತರ. ಕುವೆಂಪು ಅವರ ಜನ್ಮದಿನ ಡಿ.29ನ್ನು ವಿಶ್ವಮಾನವ ದಿನಾಚರಣೆಯಾಗಿ ಆಚರಿಸುತ್ತಾ ಬಂದಿರುವುದು ಒಂದು ಯುಗದ ಪ್ರಜ್ಞೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ರಾಚಪ್ಪ, ಇಂದಿನ ಅಶಾಂತಿಗೆ ವಿಶ್ವಮಾನವ ಸಂದೇಶ ಮದ್ದು ಆಗಿದೆ. ಜಾತಿ ವೈಷಮ್ಯ, ಧರ್ಮಗಳ ನಡುವೆ ಸಂಘರ್ಷ ಎಲ್ಲೆಡೆ ಕಂಡು ಬರುತ್ತಿದೆ. ಅದರಲ್ಲೂ ಧರ್ಮದ ಉನ್ಮಾದ ಮಿತಿ ಮೀರುತ್ತಿದೆ. ಮನುಷ್ಯ ನೆಮ್ಮದಿ ಹುಡುಕಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಪ್ರೊ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ರಾಜಲಕ್ಷ್ಮಿ, ಶಂಕರ್, ಕವಿತಾ ಉಂಬ್ಳೇಬೈಲು, ಪ್ರೊ.ಆಶಾಲತಾ, ಜಗದೀಶ್, ಆಶಾ ಶ್ರೀಧರ್, ಗಾಯತ್ರಿ, ತಾರಾಪ್ರಸಾದ್, ಉಮಾ, ನಿತಿನ್, ಸೌಭಾಗ್ಯ, ಸುಮಾ, ಪಾಲಾಕ್ಷಪ್ಪ, ರುದ್ರೇಶ್, ಮಾಯಮ್ಮ, ರಾಜಶೇಖರ್, ಸುಮತಿ, ನಾಗರತ್ನ ಸುಬ್ರಮಣ್ಯ, ಬಾಲರಾಜು ಕವನ ವಾಚಿಸಿದರು. ರಾಜಶೇಖರ್ ನಿರೂಪಿಸಿದರು. ರಮೇಶ್ ವಂದಿಸಿದರು.