ADVERTISEMENT

ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ನಿಗದಿ ಶೀಘ್ರ: ಬಿ.ವೈ.ರಾಘವೇಂದ್ರ

₹423.15 ಕೋಟಿ ವೆಚ್ಚದ ಸೇತುವೆ ಉದ್ಘಾಟನೆಗೆ ಪ್ರಧಾನಿ ಸೇರಿ ಹಲವರು ಭಾಗಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 12:53 IST
Last Updated 1 ಜುಲೈ 2025, 12:53 IST
ಸಂಸದ, ಶಾಸಕರು ಸೇರಿದಂತೆ ಹಲವು ಗಣ್ಯರು ಸಿಗಂದೂರು ಸೇತುವೆಯನ್ನು ಪರಿಶೀಲನೆ ನಡೆಸಿದರು
ಸಂಸದ, ಶಾಸಕರು ಸೇರಿದಂತೆ ಹಲವು ಗಣ್ಯರು ಸಿಗಂದೂರು ಸೇತುವೆಯನ್ನು ಪರಿಶೀಲನೆ ನಡೆಸಿದರು   

ತುಮರಿ: ಮುಳುಗಡೆ ಸಂತ್ರಸ್ತರ ಆರ್ಥಿಕತೆಗೆ ಚೈತನ್ಯ ತುಂಬುವ ಬಹು ನಿರೀಕ್ಷಿತ ಸಿಗಂದೂರು ಸೇತುವೆಯ ಉದ್ಘಾಟನೆಯ ದಿನಾಂಕವನ್ನು ಅಂತಿಮಗೊಳಿಸಲು ಚರ್ಚೆ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ತಾಲ್ಲೂಕಿನ ಸಿಗಂದೂರು ಸೇತುವೆಯನ್ನು ಮಂಗಳವಾರ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ದೇಶದ ಗಣ್ಯರು ಆಗಮಿಸುವ ಕಾರಣ ಹೆಲಿಕಾಪ್ಟರ್‌ಗಳು ಬರಲು ಪೂರಕ ಹವಾಮಾನದ ಅಗತ್ಯವಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಒಂದು ದಿನ ನಿಗದಿ ಮಾಡಬೇಕಿದೆ. ಜುಲೈ 21ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೂ ಮೊದಲು ಅಥವಾ ಅಧಿವೇಶನದ ನಂತರ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು. 

ADVERTISEMENT

‘ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ, ಹೆಚ್ಚಿನ ಅನುದಾನ ತರುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶ್ರಮವಿದೆ. ಇದು ಕೇಬಲ್ ತಂತ್ರಜ್ಞಾನದ ದೇಶದ ಎರಡನೇ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸೇತುವೆಯಿಂದಾಗಿ ಮಲೆನಾಡು ಮತ್ತು ಕರಾವಳಿಯ ಸಂಪರ್ಕ ಸಾಧ್ಯವಾಗಲಿದೆ. ಈ ಭಾಗದಲ್ಲಿರುವ ಧಾರ್ಮಿಕ ಕ್ಷೇತ್ರಗಳ ಸಂಪರ್ಕಕ್ಕೆ ಇದೊಂದು ರಾಜಮಾರ್ಗ ಆಗಲಿದೆ. ಕರೂರು, ಬಾರಂಗಿ ಹೋಬಳಿ ಹಾಗೂ ಸಾಗರ ಭಾಗದ ಆರ್ಥಿಕ ಬೆಳವಣಿಗೆಯೂ ಇದರಿಂದ ಸಾಧ್ಯವಾಗಲಿದೆ’ ಎಂದು ಹೇಳಿದರು. 

‘ಈ ಸೇತುವೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಜೊತೆಗೆ ಗುಣಮಟ್ಟದಿಂದ ಕೂಡಿದೆ. ₹423.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶೀಘ್ರವೇ ಸಾರ್ವಜನಿಕ ಸೇವೆಗೆ ಸಿಗಲಿದೆ. ದ್ವೀಪದ ಸಂತ್ರಸ್ತ ಜನರು, ಭಕ್ತರ ಆಶಯದಂತೆ ಸೇತುವೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು. 

‘ಹಸಿರು ಮಕ್ಕಿ ಸೇತುವೆ ಕಾಮಗಾರಿಯೂ ಶೀಘ್ರವೇ ಆಗಬೇಕಿದೆ. ಅದು ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಯಾಗಿದೆ. ಬೆಕ್ಕೋಡು, ಸುತ್ತಾ ಸೇತುವೆ ಕಾಮಗಾರಿಗಳೂ ಸಾಗುತ್ತಿವೆ. ಸಿಗಂದೂರು ಸೇರಿದಂತೆ ಈ ಭಾಗದ ಎಲ್ಲ ಸೇತುವೆಗಳು ಪೂರ್ಣಗೊಂಡರೆ, ಶರಾವತಿ ಹಿನ್ನೀರು ಪ್ರದೇಶದ ಅಭಿವೃದ್ಧಿ ವೇಗ ಪಡೆಯಲಿದೆ’ ಎಂದರು. 

ಶಾಸಕರಾದ ವಿಜಯೇಂದ್ರ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ಗುರುಮೂರ್ತಿ, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ ಇದ್ದರು.

ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಗಣ್ಯರು
ಉದ್ಘಾಟನೆಯ ವೇದಿಕೆ ಕಾರ್ಯಕ್ರಮಕ್ಕೆ 2 ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸ್ಥಳ ಅಂತಿಮಗೊಳಿಸಲಾಗುವುದು
ಬಿ.ವೈ.ರಾಘವೇಂದ್ರ ಸಂಸದ

ಸಿಗಂದೂರು ದೇವಿಗೆ ವಿಶೇಷ ಪೂಜೆ 

ಸೇತುವೆ ವೀಕ್ಷಣೆ ನಂತರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಇತರೆ ಗಣ್ಯರು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.