ಶಿವಮೊಗ್ಗ: ಸಾಗರ ತಾಲ್ಲೂಕು ಶರಾವತಿ ಹಿನ್ನೀರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ದೇವಸ್ಥಾನದ ಆಂತರಿಕ ವಿವಾದ ತಾರಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಘಟನೆಯ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದೆ.
ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಧರ್ಮದರ್ಶಿ ರಾಮಪ್ಪ, ಪ್ರಧಾನ ಅರ್ಚಕ ಶೇಷಗಿರಿ ಭಟ್ಟರನ್ನು ಹಲವು ತಾಸು ವಿಚಾರಣೆಗೆ ಒಳಪಡಿಸಿದರು. ದೇವಸ್ಥಾನದ ಆದಾಯ, ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಪಡೆದರು.
ದೇವಸ್ಥಾನದ ಪ್ರಧಾನ ಅರ್ಚಕ, ಧರ್ಮದರ್ಶಿ ಮಧ್ಯೆ ಹಲವು ದಿನಗಳಿಂದ ಸಂಘರ್ಷವಿತ್ತು. ಶುಕ್ರವಾರ ಅವರ ಸಹೋದರ ಸುಬ್ರಾಯ ಭಟ್ ಸ್ಥಳೀಯರೊಬ್ಬರ ಮೇಲೆ ಶುಕ್ರವಾರ ಹಲ್ಲೆ ನಡೆಸಿದ್ದರು. ದೇವಸ್ಥಾನದ ಆವರಣದಲ್ಲಿ ಚಂಡಿಕಾ ಹೋಮ ನಡೆಸಲು ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ ಎಂದು ಅರ್ಚಕರ ಕುಟುಂಬ ಮೌನ ವ್ರತ ಕೈಗೊಂಡಿತ್ತು. ನಂತರ ಪೂಜೆಗೆ ಬಂದಿದ್ದ ದ್ಯಾವಪ್ಪ ಗೌಡ, ದೇವಸ್ಥಾನದ ಸಿಬ್ಬಂದಿ ಮಹೇಶ್, ವಿಮಲಾ ಅವರ ಮೇಲೆ ಹಲ್ಲೆ ನಡೆಸಿದ್ದರು. ದೇವಸ್ಥಾನದ ಕಚೇರಿ ಕಿಟಕಿ ಗಾಜು ಒಡೆದಿದ್ದರು.
ಪ್ರತಿಭಟನೆ: ಅರ್ಚಕರ ಸಹೋದರನ ವಿರುದ್ಧ ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ ದೂರು ನೀಡಿದ್ದಾರೆ. ಹಲ್ಲೆ ನಡೆಸಿದ ಸಾಕ್ಷ್ಯಗಳಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿ ಈಡಿಗ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.
‘ದೇವಸ್ಥಾನಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಗಿದೆ. ಅಲ್ಲಿನ ಆಸ್ತಿ, ಹಣಕಾಸು ವ್ಯವಹಾರ ಕುರಿತು ಸರ್ಕಾರಕ್ಕೆ ವರದಿ ನೀಡುತ್ತೇನೆ’ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.