ಹೊಸನಗರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಆದೇಶ ಪಾಲನೆ ಮತ್ತು ಸಾರ್ವಜನಿಕರ ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡುವ ದೆಸೆಯಲ್ಲಿ ತಾಲ್ಲೂಕಿನ ರಾಮಚಂದ್ರಾಪುರಮಠದಲ್ಲಿ ನಡೆಯಬೇಕಿದ್ದ ರಾಮೋತ್ಸವವನ್ನು ಅತೀ ಸರಳ ರೀತಿಯಲ್ಲಿ ಆಚರಿಸಲು ಶ್ರೀ ಮಠ ಮುಂದಾಗಿದೆ.
ಇತಿಹಾಸ ಪ್ರಸಿದ್ಧ ಮಠದ ಶ್ರೀರಾಮೋತ್ಸವ ಮಾ.30ರಿಂದ ಏಪ್ರಿಲ್ 4ರ ವರೆಗೆ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ರಾಘವೇಶ್ವರ ಭಾರತೀ ಸ್ವಾಮೀಜಿ ನಿರ್ದೇಶನದಂತೆ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಶ್ರೀಮಠದ ಭಕ್ತರು ಮತ್ತು ಸಾರ್ವಜನಿಕರು ಸಹಕರಿಸುವಂತೆ ರಾಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿತ್ತಾರ ಮುರಳಿಧರ ತಿಳಿಸಿದ್ದಾರೆ.
ಶ್ರೀ ಮಠಕ್ಕೆ ದಿನವೂ ಭೇಟಿ ನೀಡುವ ಭಕ್ತರಿಗೆ ಕೊಡಮಾಡುವ ಪ್ರಸಾದ ಮತ್ತು ಭೋಜನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶ್ರೀಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ ತಿಳಿಸಿದ್ದಾರೆ.
ನಡೆಯದ ಸಂತೆ:ಜನತಾ ಕರ್ಪೂ ಹಿನ್ನೆಯಲ್ಲಿ ತಾಲ್ಲೂಕಿನ ನಗರ ಸಂತೆ ರದ್ದಾಗಿತ್ತು. ಸಂತೆ ರದ್ದತಿಗೆ ಆದೇಶ ಹೊರಡಿಸಿದ ತಾಲ್ಲೂಕು ಆಡಳಿತ ಕ್ರಮದಿಂದಾಗಿ ಸಂತೆ ನಡೆದಿಲ್ಲ. ಪಟ್ಟಣದ ಶನಿವಾರ ನಡೆಯುವ ವಾರದ ಸಂತೆಯೂ ರದ್ದಾಗಿತ್ತು. ಸಂತೆ ನಡೆಯದ ಪರಿಣಾಮ ಹಳ್ಳಿಗಳಿಂದ ಬಂದ ಜನರು ಪರದಾಡಬೇಕಾಯಿತು. ಸಂಜೆ ಸುಮಾರಿಗೆ ವಾಹನ ಮತ್ತು ಗಾಡಿಗಳಲ್ಲಿ ತರಕಾರಿ ಮಾರಾಟ ನಡೆದಿದ್ದು, ತರಕಾರಿ ಖರೀದಿಗೆ ಜನರು ಮುಗಿಬಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.