
ಸಾಗರ: ‘ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮೊಬೈಲ್ ಫೋನ್ ಮೂಲಕ ಮಾಡುವ ರೀಲ್ಸ್ಗಳು ಮಕ್ಕಳು ಜನರೊಂದಿಗೆ ಬೆರೆಯುವುದನ್ನು ಮರೆಸುತ್ತಿವೆ’ ಎಂದು 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಪ್ರಜ್ಞಾಭಾರತಿ ವಿದ್ಯಾಮಂದಿರದ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಅಟ್ಟೆ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶುಕ್ರವಾರ ಏರ್ಪಡಿಸಿದ್ದ 14ನೇ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
‘ಅಜ್ಜಿಯ ಸುತ್ತ ಕುಳಿತು ಕತೆಗಳನ್ನು ಕೇಳುವ, ಕೈತುತ್ತು ತಿನ್ನುವ ಮಧುರ ಕ್ಷಣಗಳನ್ನು ಮೊಬೈಲ್ ಫೋನ್ ನುಂಗಿ ಹಾಕುತ್ತಿವೆ. ಹೀಗಿರುವಾಗ ರೀಲ್ಸ್ಗಳಲ್ಲಿ ಬರುವ ಸೂಪರ್ ಸ್ಟಾರ್ಗಳಿಗಿಂತ ನಮ್ಮ ಅಜ್ಜ ಅಜ್ಜಿಯರೇ ಪ್ರತಿಭಾನ್ವಿತರು ಎಂಬ ವಿಚಾರ ನಮಗೆ ಗೊತ್ತಾಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.
ಜಂಕ್ ಫುಡ್ ಸಂಸ್ಕೃತಿ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತಿದೆ. ಸ್ಪರ್ಧೆಯು ಅಸೂಯೆ, ಮಾತ್ಸರ್ಯಗಳನ್ನು ಹೆಚ್ಚಿಸುತ್ತಾ, ಸಹಬಾಳ್ವೆ, ಅನ್ಯೋನ್ಯತೆಯನ್ನು ದೂರ ಮಾಡುತ್ತಿದೆ. ಉದ್ಯೋಗ ಸೃಷ್ಟಿ ಸವಾಲಾಗಿರುವುದರಿಂದ ಸ್ವಯಂ ಉದ್ಯೋಗಕ್ಕೆ ಅಣಿಯಾಗಬೇಕಾದ ಅಗತ್ಯತೆ ಇದೆ ಎಂದರು.
‘ಈ ಪರಿಸರ ನಮ್ಮ ತಾತ ಮುತ್ತಾತರ ಆಸ್ತಿಯಲ್ಲ. ಅದು ಮುಂದಿನ ಪೀಳಿಗಾಗಿ ನಾವು ಪಡೆದಿರುವ ಸಾಲ ಎಂಬ ಕನಿಷ್ಠ ಜ್ಞಾನ ನಮಗೆ ಬೇಕಿದೆ. ಪರಿಸರಕ್ಕೆ ಮಾರಕವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಟ್ಟು ಪರ್ಯಾಯ ಮಾರ್ಗಗಳ ಕುರಿತು ಹುಡುಕಾಟ ನಡೆಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಶಾಲಾ ಕಾಲೇಜುಗಳ ಪಕ್ಕದಲ್ಲೇ ಗಾಂಜಾ ಸೇವನೆ ಹಾವಳಿ ಹೆಚ್ಚುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾದ ನಂತರ ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಬೆಳೆಯುತ್ತಿದೆ. ಸಾಹಿತ್ಯ ಚಟುವಟಿಕೆಯಲ್ಲಿ ಭಾಗಿಯಾಗುವ ಮಕ್ಕಳು ಅಡ್ಡ ಹಾದಿ ಹಿಡಿಯುವ ಸಾಧ್ಯತೆ ಇಲ್ಲ’ ಎಂದು ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಉಪನ್ಯಾಸಕ ಗಜಾನನ ಭಟ್ ರೇವಣಕಟ್ಟಾ ಆಶಯ ಭಾಷಣ ಮಾಡಿದರು. ಸಾಹಿತಿ ವಿ.ಗಣೇಶ್ ಮಕ್ಕಳಿಗಾಗಿ ರಚಿಸಿರುವ ರಾಮಾಯಣ-ಮಹಾಭಾರತ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಸ್ವಾಮಿ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಬಿಂದು ಬಿ., ಪ್ರಮುಖರಾದ ಸತ್ಯನಾರಾಯಣ ಸಿರಿವಂತೆ, ಲಕ್ಷ್ಮಣ್ ಆರ್.ನಾಯ್ಕ, ಓಂಕಾರಪ್ಪ, ಭೂಕೇಶ್ವರಪ್ಪ,ನಾಗರಾಜ್ ಗುಡ್ಡೆಮನೆ, ಕವಿರಾಜ್ ಇದ್ದರು.
ದಿಯಾ ಹೆಗಡೆ ಪ್ರಾರ್ಥಿಸಿದರು. ಸದಾನಂದ ಶರ್ಮ ಸ್ವಾಗತಿಸಿದರು. ಶ್ರಾವ್ಯ ಸಾಗರ್ ನಿರೂಪಿಸಿದರು. ಆರಂಭದಲ್ಲಿ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಗಣಪತಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ಸಮೃದ್ಧ ಸಮಾಜ ನಿರ್ಮಿಸುವುದು ಸಾಹಿತ್ಯದ ಉದ್ದೇಶ
ಮೌಲ್ಯಯುತ ವಿಚಾರಗಳ ಮೂಲಕ ಸಮೃದ್ಧ ಸಮಾಜವನ್ನು ನಿರ್ಮಿಸುವುದು ಸಾಹಿತ್ಯದ ನಿಜವಾದ ಉದ್ದೇಶ ಎಂದು ಸಿರಿವಂತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿ ಸಾಹಿತ್ಯ ಕೆ. ಹೇಳಿದರು.
‘ಪುಸ್ತಕಗಳ ಓದು ನಮ್ಮಲ್ಲಿ ಪೂರ್ಣತೆಯ ಭಾವ ಮೂಡಿಸುತ್ತದೆ. ಪುಸ್ತಕಗಳ ಪುಟಗಳು ಜ್ಞಾನದ ಬಾಗಿಲು ತೆರೆಯುವ ಕಿಟಕಿಗಳು ಇದ್ದಂತೆ. ಪುಸ್ತಕ ಓದುವ ಅಭಿರುಚಿ ಇದ್ದರೆ ಯಾವತ್ತೂ ಒಂಟಿತನದ ಭಾವ ಕಾಡುವುದಿಲ್ಲ’ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಹೇಳಿದರು.
‘ಎಂತಹ ದೊಡ್ಡ ವೇದಿಕೆಯಾದರೂ ಕನ್ನಡದಲ್ಲೇ ಮಾತನಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕಿದೆ. ಒಂದು ವೇಳೆ ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಅವರೊಂದಿಗೆ ಕನ್ನಡದಲ್ಲೇ ಮಾತನಾಡುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.