
ಸೊರಬ: ತಾಲ್ಲೂಕಿನ ಗೆಂಡ್ಲ ಹೊಸೂರು ಗ್ರಾಮದ ಯುವ ರೈತ ತಿಲಕ್ಕುಮಾರ್ ಅಡಿಕೆ- ಶುಂಠಿಯಲ್ಲಿ ಹಸಿ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ಜೊತೆಗೆ ಅಧಿಕ ಆದಾಯವನ್ನೂ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಇವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ವಿವಿಧ ತಳಿಯ 2,000 ಮೆಣಸಿನಕಾಯಿ ಸಸಿ ಬೆಳೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಬೆಳೆದ ಗಿಡದಿಂದ ಈಗಲೂ ಆದಾಯ ಪಡೆಯುತ್ತಿದ್ದಾರೆ. ಅಡಿಕೆ ಗಿಡಗಳ ನಡುವೆ ಶುಂಠಿ ಬೆಳೆದಿದ್ದು, ಅದರೊಟ್ಟಿಗೆ ಬೆಳೆದಿರುವ ಮೆಣಸಿನ ಗಿಡಗಳು ಈಗಲೂ ಕಾಯಿಕಟ್ಟಿವೆ. ಹಸಿ ಮೆಣಸಿನಕಾಯಿ ಮಾರಾಟ ಮಾಡುವ ಉದ್ದೇಶದಿಂದ ಗಿಡ ಬೆಳೆದಿದ್ದು, ಕಟಾವು ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ.
‘ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಣಸಿನ ಬೀಜ ತಂದು ನಾಟಿ ಮಾಡಿದ್ದೆವು. ಬೀಜ ಖರೀದಿ ಹಾಗೂ ಸಸಿಗಳ ಪೋಷಣೆಗೆ ₹ 2,000 ಖರ್ಚಾಗಿದೆ. ಗೊಬ್ಬರ, ಔಷಧಿಗೆ ₹ 4,000 ಖರ್ಚಾಗಿದೆ. ಅಡಿಕೆ ಹಾಗೂ ಶುಂಠಿ ಬೆಳೆ ಜತೆಗೆ ಮೆಣಸಿನ ಗಿಡಗಳಿಗೂ ಜೆಟ್ ನೀರಾವರಿ ವ್ಯವಸ್ಥೆ ಮಾಡಿಸಿದ್ದೇನೆ. ಇದರಿಂದ ನೀರು ಪೋಲಾಗುವುದು ತಪ್ಪುತ್ತದೆ. ಸಸಿ ನಾಟಿ ಮಾಡುವುದರಿಂದ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಔಷಧ ಸಿಂಪಡಣೆಯನ್ನು ನಾವೇ ಮಾಡಿದ್ದೇವೆ. ಇದರಿಂದ ಕೂಲಿ ಹಣ ಉಳಿತಾಯ ಆಗಿದೆ’ ಎನ್ನುತ್ತಾರೆ ಕೃಷಿಕ ತಿಲಕ್ಕುಮಾರ್.
‘ಪ್ರತಿ ಗಿಡದಲ್ಲಿ ವಾರಕ್ಕೆ ಎರಡು ಬಾರಿ ಕಾಯಿ ಬಿಡಿಸಿ ಸೊರಬ- ಆನವಟ್ಟಿ ಸಂತೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದೇನೆ. ಆಗಸ್ಟ್ ಅಂತ್ಯದಲ್ಲಿ ಕೆ.ಜಿ.ಗೆ ₹ 20ರಿಂದ ₹ 25 ದರವಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 50ರಿಂದ ₹ 60 ದರವಿದ್ದು, ವಾರಕ್ಕೆ ಎರಡು ಬಾರಿ ಕಾಯಿ ಬಿಡಿಸಬಹುದು. ಆಗಸ್ಟ್ ತಿಂಗಳಲ್ಲಿ ಸಸಿ ನಾಟಿ ಮಾಡಿದ್ದು, ಗಿಡಕ್ಕೆ ಅರ್ಧ ಕೆ.ಜಿ. ಮೆಣಸಿನ ಕಾಯಿ ಸಿಗುತ್ತಿದೆ. ಕ್ವಿಂಟಲ್ಗೆ ₹ 6,000 ಸಿಕ್ಕಿದ್ದು, ನಾಲ್ಕು ತಿಂಗಳಲ್ಲಿ ₹ 80,000 ಆದಾಯ ಪಡೆದಿದ್ದೇನೆ. ₹ 1 ಲಕ್ಷಕ್ಕಿಂತ ಅಧಿಕ ಆದಾಯ ಬರುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.