ಶಿವಮೊಗ್ಗ: ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಿರ್ದೋಷಿಯಾಗಿ ಹೊರಗೆ ಬರುವೆ’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಗುತ್ತಿಗೆ ವ್ಯವಹಾರದಲ್ಲಿ ಸಂತೋಷ್ ಪಾಟೀಲ ಅವರಿಂದ ಒಂದು ಪರ್ಸೆಂಟ್ ಕೇಳಿದ್ದರೂ, ನನಗೆ ಶಿಕ್ಷೆಯಾಗಲಿ. ಈಗ ನಡೆಯುತ್ತಿರುವ ತನಿಖೆಯಿಂದ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿವೆ. ದಾಖಲೆಗಳು ಸಾಕ್ಷಿಯಾಗುತ್ತಿವೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಷಡ್ಯಂತ್ರಗಳೂ ಬೆಳಕಿಗೆ ಬರಲಿವೆ’ ಎಂದರು.
ಪ್ರಧಾನಿ ಮೋದಿ ಅವರು ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲೂ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಬಗೆಹರಿಸಲು ಹಲವು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿವೆ. ಕೇಂದ್ರದಿಂದ ಜಲಜೀವನ್ ಮಿಷನ್, ಉದ್ಯೋಗ ಖಾತ್ರಿ, ರಸ್ತೆ ಅಭಿವೃದ್ಧಿ, ಉದ್ಯೋಗ, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.