ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)ಯನ್ನು ಮುಚ್ಚುವ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಲು ಎರಡು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ಶನಿವಾರ ನಡೆದ ಸಭೆಯಲ್ಲಿ ಚರ್ಚೆ ನಡೆಸಿದ ಮುಖಂಡರು, ‘ಕಾರ್ಮಿಕ ಇಲಾಖೆ ಆದೇಶ ನಂತರ 214 ನೌಕರರಲ್ಲಿ ಈಗಾಗಲೇ ಕೆಲವರು ಬೇರೆ ಇಲಾಖೆಗೆ ನಿಯುಕ್ತಿ ಹೊಂದುವ ಮೂಲಕ ಕೆಲಸ ನಿರ್ವಹಣೆ ಮಾಡುತ್ತಿದ್ದು, ಬಾಕಿ ಉಳಿದಿರುವ ನೌಕರರಿಗೆ ಯಾವುದೇ ಸೇವಾ ಭದ್ರತೆ ಒದಗಿಸದೇ ಮುಚ್ಚುವ ಆದೇಶ ಹೊರಡಿಸಿರುವುದು ಖಂಡನೀಯ’ ಎಂದು ಹೇಳಿದರು.
‘ಈಗ ಇರುವ ನೌಕರರು ಯಾವುದೇ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಅವರನ್ನು ರಕ್ಷಣೆ ಮಾಡುವ ಜವಾಬ್ದಾರಿ ಆಡಳಿತ ಮಂಡಳಿ ಹಾಗೂ ಸರ್ಕಾರದ್ದು. ಯಾವುದಾದರೂ ರೂಪದಲ್ಲಿ ಭದ್ರತೆ ವ್ಯಾಪ್ತಿಗೆ ತಂದು ಮುಂದಿನ ಕ್ರಮ ಜರುಗಿಸಲಿ. ಇದಕ್ಕಾಗಿ ನಿರಂತರ ಹೋರಾಟ ಮಾಡುವ ಅಗತ್ಯ ಇದೆ’ ಎಂದು ಮುಖಂಡರು ಹೇಳಿದರು.
ಸಂಸದರ ಭೇಟಿ: ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರನ್ನು ಕಾರ್ಮಿಕರು ಹಾಗೂ ಕುಟುಂಬದವರು ಭಾನುವಾರ ಶಿವಮೊಗ್ಗದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾರ್ಮಿಕರ ಬವಣೆ ಹಾಗೂ ಮುಚ್ಚುವ ಆದೇಶದಿಂದ ಎದುರಾಗಿರುವ ಸಮಸ್ಯೆಯನ್ನು ಸಂಸದರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಯಿತು.
ಕಾರ್ಮಿಕರ ಅಹವಾಲು ಆಲಿಸಿದ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಕಾರ್ಮಿಕರ ಹಿತವನ್ನು ರಕ್ಷಿಸಿಕೊಂಡು ಮಾಡಬೇಕಾದ ಕೆಲಸಗಳ ಕುರಿತಾಗಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದರು.
ಬಿಜೆಪಿ ಮುಖಂಡರಾದ ಶ್ರೀನಾಥ್, ಧರ್ಮಪ್ರಸಾದ್, ಪ್ರಭಾಕರ, ಜಯರಾಂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.