ADVERTISEMENT

ಸಂತ್ರಸ್ತರ ನೆರವಿಗೆ ಧಾವಿಸದ ಸರ್ಕಾರ: ಕಾಗೋಡು ತಿಮ್ಮಪ್ಪ ಆರೋಪ

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಚಿವ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:19 IST
Last Updated 14 ಆಗಸ್ಟ್ 2022, 3:19 IST
ಆನಂದಪುರ ಸುತ್ತಮುತ್ತ ನೆರೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.
ಆನಂದಪುರ ಸುತ್ತಮುತ್ತ ನೆರೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ವೈಯಕ್ತಿಕ ಧನ ಸಹಾಯ ಮಾಡಿದರು.   

ಆನಂದಪುರಂ: ಮಲೆನಾಡು ಭಾಗದಲ್ಲಿ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾಗಿದೆ. ಈ ಬಾರಿ ಅತಿ ಹೆಚ್ಚಿನ ನಷ್ಟ ಸಂಭವಿಸಿದೆ. ತಕ್ಷಣ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಆನಂದಪುರ, ಆಚಾಪುರ, ಯಡೇಹಳ್ಳಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.

ನಿರಂತವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಮನೆ, ನಾಟಿ ಮಾಡಿದ ಗದ್ದೆ, ಅಡಿಕೆ ತೋಟ ಸೇರಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಅನೇಕ ಭಾಗಗಳಲ್ಲಿ ಹಕ್ಕುಪತ್ರ ಇಲ್ಲದ ಮನೆಗಳು ಕುಸಿದು ಬಿದ್ದಿದೆ. ಬೆಳೆಗಳು ನೀರು ಪಾಲಾಗಿದೆ. ಸರ್ಕಾರ ಪರಿಶೀಲಿಸಿ ಪರಿಹಾರಕ್ಕೆ ಪರಿಗಣಿಸಬೇಕು. ನೋಡಲ್ ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುವಾಗ ಮಾನವೀಯತೆ ಮರೆಯಬೇಕು. ಮೀನಮೇಷ ಎಣಿಸದೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಳೆಯಿಂದ ಮನೆ ಕಳೆದುಕೊಂಡವರಿಗೆ, ಜಮೀನಿನಲ್ಲಿ ಫಸಲು ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ದೂರಿದರು.

ನಂತರ ಅವರು ಅಪಘಾತದಲ್ಲಿ ಮೃತಪಟ್ಟ 6 ವರ್ಷದ ಅಭಿಷೇಕ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಮಾಧಾನ ಹೇಳಿದರು.

ಜ್ಯೋತಿ ಕೋವಿ, ಯಶೋದಮ್ಮ, ಗಣಪತಿ ಯಡೇಹಳ್ಳಿ, ಹಾಜಿರಾಬಿ, ಬಸವರಾಜ್, ನಾಗರತ್ನಮ್ಮ, ನಜರುಲ್ಲಾ ಖಾನ್, ನಟರಾಜ್, ಕಲಿಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.