ADVERTISEMENT

ಶಿವಮೊಗ್ಗ: ಚಿತ್ರಮಂದಿರ ತೆರೆಯಲು ಮಾಲೀಕರ ಹಿಂದೇಟು

ಕೋವಿಡ್‌ ಭಯ, ಪ್ರೇಕ್ಷಕರ ಕೊರತೆ, ಬಿಡುಗಡೆಯಾಗದ ಸ್ಟಾರ್‌ ನಟರ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:03 IST
Last Updated 26 ಜುಲೈ 2021, 4:03 IST
ಶಿವಮೊಗ್ಗ ನಗರದ ವೀರಭದ್ರಪ್ಪ ಚಿತ್ರಮಂದಿರ ಬಾಗಿಲು ಹಾಕಿರುವುದು.
ಶಿವಮೊಗ್ಗ ನಗರದ ವೀರಭದ್ರಪ್ಪ ಚಿತ್ರಮಂದಿರ ಬಾಗಿಲು ಹಾಕಿರುವುದು.   

ಶಿವಮೊಗ್ಗ: ಕೋವಿಡ್‌–19 ಕಾರಣಕ್ಕೆ ಬಂದ್ ಆಗಿದ್ದ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದರೂ, ಜಿಲ್ಲೆಯ ಮಾಲೀಕರು ಮನಸ್ಸು ಮಾಡಿಲ್ಲ.

ರಾಜ್ಯ ಸರ್ಕಾರ ಲಾಕ್‌ಡೌನ್‌ನ ಭಾಗವಾಗಿ ರಾಜ್ಯದೆಲ್ಲೆಡೆ ಚಿತ್ರಮಂದಿರ ಬಂದ್‌ ಮಾಡುವಂತೆ ಆದೇಶಿಸಿತ್ತು. ಈ ಆದೇಶದನ್ವಯ ಜಿಲ್ಲೆಯಲ್ಲೂ ಚಿತ್ರಮಂದಿರ ಬಂದ್‌ ಮಾಡಲಾಗಿತ್ತು. ನಂತರ ಲಾಕ್‌ಡೌನ್‌ ಆದೇಶ ಹಿಂಪಡೆದ ಸರ್ಕಾರ ಚಿತ್ರಮಂದಿರಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿರಲಿಲ್ಲ.

ಈಗ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭಕ್ಕೆ ಸರ್ಕಾರ ಸಮ್ಮತಿಸಿದೆ. ಆದರೆ, ಕೋವಿಡ್‌ ಮಾರ್ಗಸೂಚಿ ಪಾಲನೆ ಕಷ್ಟವೆಂಬ ಕಾರಣ ಜಿಲ್ಲೆಯಲ್ಲಿ ಚಿತ್ರಮಂದಿರಗಳ ಮಾಲೀಕರು ಚಿತ್ರ ಪ್ರದರ್ಶನ ಆರಂಭಿಸಿಲ್ಲ. ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದರೂ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಸೂಚಿಸಿದೆ. ಇದರಿಂದ ಪ್ರೇಕ್ಷಕರ ಕೊರತೆಯ ಆತಂಕ ಎದುರಾಗಿದೆ.

ADVERTISEMENT

ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಲಾನ್‌ಲಾಕ್‌ ಬಳಿಕ ಜನರು ನಗರ ಪ್ರದೇಶಗಳಿಗೆ ಬರತೊಡಗಿದ್ದಾರೆ. ಮಾರುಕಟ್ಟೆ, ಸರ್ಕಾರಿ ಕಚೇರಿಗಳಲ್ಲಿ ಜನ ಸಂದಣಿಯೂ ಇದೆ. ಚಿತ್ರಮಂದಿರಕ್ಕೆ ಬರುತ್ತಾರೆಯೇ ಎಂಬ ಅನುಮಾನ ಚಿತ್ರಮಂದಿರದ ಮಾಲೀಕರಲ್ಲಿದೆ. ಸಿನಿಮಾ ಪ್ರದರ್ಶನಕ್ಕೆ ಹಾಕುವ ಬಂಡವಾಳ ಸಹ ಮರಳುವ ಭರವಸೆ ಇಲ್ಲ ಎನ್ನುವುದು ಅವರ ಅಳಲು.

ಆರ್ಥಿಕ ಹೊರೆ: ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿತ್ರಮಂದಿರಗಳಲ್ಲಿ ಡಿಜಿಟಲ್‌ ಟಿಕೆಟ್‌ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮಾಸ್ಕ್‌ ಧರಿಸಿದ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರನ್ನೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಪ್ರದರ್ಶನ ಮುಗಿದ ಬಳಿಕ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು. ಜತೆಗೆ ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು.

ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಲು ಹೊರಟರೆ ಆರ್ಥಿಕ ಹೊರೆ ಹೆಚ್ಚುತ್ತದೆ. ಆಸನಗಳ ಮಧ್ಯೆ ಅಂತರ ಕಾಯ್ದುಕೊಂಡರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಆದಾಯ ಕುಸಿಯುತ್ತದೆ ಎಂದು ಚಿತ್ರಮಂದಿರಗಳ ಮಾಲೀಕರು ಆತಂಕ ವ್ಯಕ್ತಪಡಿಸುತ್ತಾರೆ.

ಹೊಸ ಸಿನಿಮಾಗಳಿಲ್ಲ: ಹಲವು ತಿಂಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದ ಕಾರಣ ಹೊಸ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿಲ್ಲ. ಒಂದೆರಡು ಸಿನಿಮಾಗಳನ್ನು ಎಲ್ಲ ಚಿತ್ರಮಂದಿರಗಳಲ್ಲೂ ಪ್ರದರ್ಶಿಸಲು ಸಾಧ್ಯವಿಲ್ಲ. ಹಳೆಯ ಚಿತ್ರಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಬರುವುದು ಅನುಮಾನ.

ನೆಚ್ಚಿನ ನಟರ ದೊಡ್ಡ ಬಜೆಟ್‌ ಸಿನಿಮಾಗಳೇ ಚಿತ್ರಮಂದಿರಗಳ ಜೀವಾಳ. ಇಂತಹ ಸಿನಿಮಾಗಳು ಬಿಡುಗಡೆಯಾದಾಗ ಹಲವು ದಿನಗಳವರೆಗೆ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಾರೆ. ಈಗ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇದೆ. ದೊಡ್ಡ ಬಜೆಟ್‌ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲಿದೆ. ಜನರು ಕೋವಿಡ್‌ ಭಯದಿಂದ ಸಂಪೂರ್ಣವಾಗಿ ಹೊರ ಬರುವವರೆಗೂ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

‘ಚಿತ್ರಮಂದಿರದಲ್ಲಿ ತಿಂಗಳಿಗೆ ಒಂದೂವರೆ ₹ 1 ಲಕ್ಷದಿಂದ ₹ 2 ಲಕ್ಷದವರೆಗೆ ಖರ್ಚು ಬರುತ್ತದೆ. ಆಗಸ್ಟ್‌ನಲ್ಲಿ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಆ ಸಮಯದಲ್ಲಿ ಸರ್ಕಾರ ಶೇ 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೆ ಪ್ರದರ್ಶನ ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ವೀರಭದ್ರೇಶ್ವರ ಚಿತ್ರಮಂದಿರ ಮಾಲೀಕ ನವೀನ್.

***

ಜಿಲ್ಲೆಯಲ್ಲಿ ಸದ್ಯ 17 ಚಿತ್ರ ಮಂದಿರಗಳಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗಿದೆ. ಆದರೆ, ಪ್ರೇಕ್ಷಕರು ಅಷ್ಟಾಗಿ ಬರುತ್ತಿಲ್ಲ. ಹೊಸ ಚಿತ್ರಗಳು ಬಿಡುಗಡೆಯಾಗದೆ ಚಿತ್ರಮಂದಿರ ಆರಂಭ ಕಷ್ಟ.
-ನವೀನ್‌, ವೀರಭದ್ರೇಶ್ವರ ಚಿತ್ರಮಂದಿರ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.