ಶಿವಮೊಗ್ಗ: ಕೋವಿಡ್ ಸಮಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು ಅಭಿನಂದನಾರ್ಹರು ಎಂದು ಸಂಸದ ಬಿ.ವೈ. ರಾಘವೇಂದ್ರ ಶ್ಲಾಘಿಸಿದರು.
ಕುವೆಂಪು ರಂಗಮಂದಿರದಲ್ಲಿ ಬುಧವಾರ ಸರ್ಜಿ ಫೌಂಡೇಷನ್ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಅಭಿನಾಂದನಾ ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಯ ಆರೋಗ್ಯ ಕಾರ್ಡ್ಗಳನ್ನು ವಿತರಿಸಿ ಅವರು ಮಾತನಾಡಿದರು.
‘ಗ್ರಾಮಸ್ಥರು, ಕುಟುಂಬದವರ ಕಟುಮಾತುಗಳನ್ನು ಲೆಕ್ಕಿಸದೇ ಸಿಕ್ಕಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಿದ್ದಾರೆ. ಮಹಾಮಾರಿ ಕೊರೊನಾ ಹೊಡೆದೊಡಿಸಲು ಶ್ರಮಿಸಿದ ಆಶಾವಾದದ ಆಶಾ ಕಾರ್ಯಕರ್ತೆಯರಿಗೆ ಈ ಆಭಿನಂದನೆ ಅರ್ಥಪೂರ್ಣವಾದದು. ಸಂಸತ್ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲಾಗುವುದು. ಆಶಾ ಕಾರ್ಯಕರ್ತೆಯರಿಗೆ ಅನುಕೂಲ ಕಲ್ಪಿಸಲು ಶ್ರಮಿಸಲಾಗುವುದು’ ಎಂದರು.
ಆರೋಗ್ಯ ಕಿಟ್ ಅನ್ನು ವಿತರಿಸಿದ ವಿಧಾನ ಪರಿಷತ್ತಿನ ಸದಸ್ಯ ರುದ್ರೇಗೌಡ್ರು ಮಾತನಾಡಿ, ‘ಆಶಾ ಕಾರ್ಯಕರ್ತರು ಮತ್ತು ಅವರ ಕುಟುಂಬದವರ ಆರೋಗ್ಯಕ್ಕಾಗಿ ಅವಶ್ಯವಿರುವ ಪ್ರಾಥಮಿಕ ಆರೋಗ್ಯ ಪರೀಕ್ಷಾ ಸಾಮಗ್ರಿಗಳು, ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡ ಒಂದು ಉತ್ತಮವಾದ ಕಿಟ್ನ್ನು ಕೊಡುತ್ತಿರುವ ಚೈತನ್ಯ ಫೌಂಡೇಷನ್,ಸರ್ಜಿ ಫೌಂಡೇಷನ್ ಕಾರ್ಯ ಶ್ಲಾಘನೀಯ. ಬಹಳ ಉಪಯುಕ್ತವಾಗಿದೆ. ಇದೊಂದು ಸಾಮಾಜಿಕ ಕಳಕಳಿಯ ಉತ್ತಮ ವಿಚಾರ’ ಎಂದರು.
ವಿಧಾನ ಪರಿಷತ್ನ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ‘ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿಟ್ಟು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲೆ ಮರೆಯ ಕಾಯಿಯಂತೆ ಸದಾ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತ ಸಹೋದರಿಯರಿಗೆ ಅಭಿನಂದಿಸುತ್ತಿರುವುದು ಹೆಮ್ಮೆಯ ಸಂಗತಿ. ’ ಎಂದು ಸಲಹೆ ನೀಡಿದರು.
ಚೈತನ್ಯ ರೂರಲ್ ಡೆವಲೆಪ್ಮೆಂಟ್ ಸೊಸೈಟಿನಿರ್ದೇಶಕ ಡಾ.ಎಲ್.ಕೆ. ಶ್ರೀಪತಿ, ಧ್ವನಿ ಫೌಂಡೇಷನ್ನ ಸೈಯದ್ ಸಿದ್ಧಿಕಿ,ಸರ್ಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಸರ್ಜಿ, ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್, ಡಿಎಚ್ಒ ಡಾ. ರಾಜೇಶ್ ಸುರಗಿಹಳ್ಳಿ, ಮೇಯರ್ ಸುನಿತಾ ಅಣ್ಣಪ್ಪ, ಚೈತನ್ಯ ಸಂಸ್ಥೆಯ ಸಿಇಒ ಬಿ.ಟಿ. ಭದ್ರೇಶ್, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿ ಪುರುಷೋತ್ತಮ್ ಕೆ.ಆರ್, ಮೇಘನಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.