ADVERTISEMENT

ರಾಜ್ಯದ ಆಮ್ಲಜನಕ ರಾಜ್ಯಕ್ಕೇ ಬಳಕೆ: ಕೇಂದ್ರಕ್ಕೆ ಶೆಟ್ಟರ್‌ ಮನವಿ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:20 IST
Last Updated 7 ಮೇ 2021, 4:20 IST
ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಪಿಎಲ್ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಗುರುವಾರ ಕೈಗಾರಿಕಾ ಸಚಿವರ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನಿಡಿ ಪರಿಶೀಲನೆ ನಡೆಸಿದರು
ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಪಿಎಲ್ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಗುರುವಾರ ಕೈಗಾರಿಕಾ ಸಚಿವರ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನಿಡಿ ಪರಿಶೀಲನೆ ನಡೆಸಿದರು   

ಭದ್ರಾವತಿ: ‘ರಾಜ್ಯದಲ್ಲಿ ಆಮ್ಲಜನಕ ಉತ್ಪಾದಿಸುವ ಏಳು ಉದ್ದಿಮೆಗಳಿವೆ. ಅವುಗಳ ಬಳಕೆಯನ್ನು ರಾಜ್ಯದಲ್ಲೇ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ವಿಐಎಸ್ಎಲ್ ಕಾರ್ಖಾನೆ ಎಂಎಸ್‌ಪಿಎಲ್ ಆಮ್ಲಜನಕ ಘಟಕಕ್ಕೆ ಗುರುವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

‘ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಮನವಿ ಮಾಡಲಾಗಿದೆ. ರಾಜ್ಯದ ಬೃಹತ್ ಉದ್ದಿಮೆ ಜಿಂದಾಲ್ ಕಾರ್ಖಾನೆ ಪ್ರತಿದಿನ 450ರಿಂದ 500 ಟನ್ ಆಮ್ಲಜನಕ ಉತ್ಪಾದನೆ ಮಾಡುತ್ತಿತ್ತು. ಬೇಡಿಕೆ ಹೆಚ್ಚಿದ ಪರಿಣಾಮ ಹೆಚ್ಚು ಉತ್ಪಾದನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಕಾರ್ಖಾನೆ ಪ್ರತಿದಿನ 1 ಸಾವಿರ ಟನ್ ಉತ್ಪಾದನೆಗೆ ಮುಂದಾಗಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರದ ಮನವಿಗೆ ಹಲವು ಖಾಸಗಿ ಕಂಪನಿಗಳು ಸ್ಪಂದಿಸಿ, ಉತ್ಪಾದನಾ ಪ್ರಮಾಣ ಹೆಚ್ಚಳ ಮಾಡಿವೆ. ಜತೆಗೆ ಮುಚ್ಚಿರುವ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಕಂಪನಿಗಳನ್ನು ಪುನಃ ಆರಂಭಿಸುವಂತೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ’ ಎಂದರು.

ಉತ್ಪಾದನೆ ಆರಂಭ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಒಳಗಿರುವ ಎಂಎಸ್‌ಪಿಎಲ್ ಆಮ್ಲಜನಕ ಘಟಕ ಉತ್ಪಾದನೆ ಆರಂಭಿಸಿದ್ದು, ಇದರಿಂದ ಪ್ರತಿದಿನ ಸುಮಾರು 150 ಸಿಲಿಂಡರ್ ಆಮ್ಲಜನಕ ಸಿಗಲಿದೆ. ಮತ್ತಷ್ಟು ಉನ್ನತೀಕರಿಸಿದರೆ ಹೆಚ್ಚಿನ ಆಮ್ಲಜನಕ ಉತ್ಪಾದನೆ ಸಾಧ್ಯವಾಗಲಿದೆ. ಸುತ್ತಲ ಜಿಲ್ಲೆಗಳಿಗೆ ಪ್ರಯೋಜನ ದೊರಕುವಂತೆ ಮಾಡಲಾಗುವುದು ಎಂದು ಶೆಟ್ಟರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.