ADVERTISEMENT

ತೀರ್ಥಹಳ್ಳಿ: ವರ್ತಕರಿಂದ ಚುನಾವಣಾ ಬಹಿಷ್ಕಾರ ಎಚ್ಚರಿಕೆ

30ಕ್ಕೂ ಹೆಚ್ಚು ಮಳಿಗೆಗಳನ್ನು ಮುಚ್ಚಿಸಿದ್ದಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 10:11 IST
Last Updated 14 ಏಪ್ರಿಲ್ 2023, 10:11 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿಯ ಮುಂಭಾಗ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿರುವುದು.
ತೀರ್ಥಹಳ್ಳಿ ತಾಲ್ಲೂಕು ಕಚೇರಿಯ ಮುಂಭಾಗ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿರುವುದು.   

ತೀರ್ಥಹಳ್ಳಿ: ‘ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯ ಸುತ್ತಮುತ್ತಲು ನಿರ್ಬಂಧಕಾಜ್ಞೆ ವಿಧಿಸಲಾಗಿದ್ದು ಸಮೀಪದ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿದೆ. ತಕ್ಷಣ ಮಳಿಗೆಯ ವ್ಯಾಪಾರಸ್ಥರಿಗೆ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ತಾಲ್ಲೂಕು ವರ್ತಕರ ಸಂಘ ಆಗ್ರಹಿಸಿ ಚುನಾವಣಾಧಿಕಾರಿಗೆ ಮನವಿ
ಸಲ್ಲಿಸಿತು.

ಏ. 13 ರಿಂದ 20ರವರೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ತಾಲ್ಲೂಕು ಕಚೇರಿಯ ಸುತ್ತಮುತ್ತಲಿನ 100 ಮೀಟರ್‌ ಅಂತರದಲ್ಲಿ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳನ್ನು ಮುಚ್ಚುವಂತೆ ಚುನಾವಣಾಧಿಕಾರಿ ಆದೇಶಿಸಿದ್ದಾರೆ. ಇದರಿಂದ ಸುತ್ತಲಿನ ಜೆರಾಕ್ಸ್‌, ಹೋಟೆಲ್‌, ಸಹಕಾರ ಸಂಘ, ಅಂಗಡಿಗಳನ್ನು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿತ್ತು.

‘ತಾಲ್ಲೂಕು ಕಚೇರಿ ರಾಷ್ಟ್ರೀಯ ಹೆದ್ದಾರಿ 169 ಎ ಸಮೀಪದ 50 ಮೀಟರ್‌ ಅಂತರದಲ್ಲಿದೆ. ಹೀಗಾಗಿ ನಿರ್ಬಂಧಕಾಜ್ಞೆ ಹಿನ್ನೆಲೆಯಲ್ಲಿ ರಸ್ತೆಯ ಮಾರ್ಗವನ್ನು ಬದಲಾಯಿಸಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಲಾಗಿದೆ. ಆಜಾದ್‌ ರಸ್ತೆಯ ಮಾರ್ಗದಲ್ಲಿ ತಾಲ್ಲೂಕು ಆಡಳಿತದ ನಿರ್ಧಾರ ಜನ ವಿರೋಧಿಯಾಗಿದ್ದು ತಕ್ಷಣ ರದ್ದು ಮಾಡಬೇಕು’ ಎಂದು ವರ್ತಕರ ಸಂಘ ಹಾಗೂ ಸಾರ್ವಜನಿಕರು
ಆಗ್ರಹಿಸಿದರು.

ADVERTISEMENT

‘ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಮುಕ್ತವಾಗಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಬೇಕು. ನಿರ್ಬಂಧಕಾಜ್ಞೆ ಹೆಸರಲ್ಲಿ ವಹಿವಾಟು ಸ್ಥಗಿತಗೊಳಿಸುವುದು ಖಂಡನೀಯ. ದಿನದ ವಹಿವಾಟಿಗೆ ಅಡ್ಡಿ ಪಡಿಸಿದರೆ ಅಂತಹ ಚುನಾವಣೆ ಜನರಿಗೆ ಬೇಕಿಲ್ಲ. ವ್ಯಾಪಾರಕ್ಕೆ ಅವಕಾಶ ಮಾಡದಿದ್ದರೆ ವರ್ತಕರ ಸಂಘದಿಂದ ಚುನಾವಣೆ ಬಹಿಷ್ಕರಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ತಾಲ್ಲೂಕು ಕಚೇರಿಯ ಸುತ್ತ ಮೌನ: ಪೊಲೀಸರು ಹಾಗೂ ಕೇಂದ್ರ
ಅರೆಸೇನಾ ಸಿಬ್ಬಂದಿ ಕ್ಷೇತ್ರ ಚುನಾವಣಾಧಿಕಾರಿಗಳ ಆದೇಶ ಪಾಲಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಹಲವು ಮಳಿಗೆಗಳನ್ನು ಮುಚ್ಚಿಸಿದರು. ಅಲ್ಲದೇ ತಾಲ್ಲೂಕು ಕಚೇರಿ ಸುತ್ತಮುತ್ತಲು ಗಸ್ತು ತಿರುಗುತ್ತಿದ್ದ ದೃಶ್ಯ
ಸಾಮಾನ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.