
ತೀರ್ಥಹಳ್ಳಿ: ಸ್ತನ ಕ್ಯಾನ್ಸರ್ ಕುರಿತ ‘ಜೋಪಾನ ಸಖೀ ಜೋಪಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅ.26ರ ಸಂಜೆ 4ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃತಿಯ ಲೇಖಕಿ ಎಂ.ಜಿ.ಗಾಯತ್ರಿ ಶೇಷಗಿರಿ ತಿಳಿಸಿದರು.
ಸ್ತನದ ಕುರಿತು ಮಹಿಳೆಯರಲ್ಲಿ ಸಂವೇದನಾತ್ಮಕ ಭಾವನೆಗಳಿವೆ. ಅದರಲ್ಲೂ ಕ್ಯಾನ್ಸರ್ ಪೀಡಿತರು ಭಯಪಡುವ ಸ್ಥಿತಿ ಇರುತ್ತದೆ. ಅವರು ತಮ್ಮ ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳಲಾಗದಷ್ಟು ವೇದನೆ ಅನುಭವಿಸುತ್ತಾರೆ. ಅಂತಹ ವಿಶೇಷ ಕಥೆಗಳು ಕೃತಿಯಲ್ಲಿ ಅಡಕವಾಗಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಭಾರತದಲ್ಲಿ ಸ್ತನ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿರುವ ಕಾಯಿಲೆಯಾಗಿದೆ. ವೈದ್ಯಕೀಯ ತಂತ್ರಜ್ಞಾನ ಮುಂದುವರೆದಿದ್ದು, ಆಯ್ದ ಭಾಗಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದು. ರೋಗಿಗಳು, ರಾಜ್ಯದ ವಿವಿಧ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಅನುಭವ, ಚಿಕಿತ್ಸೆಯ ಬಗೆಗೆ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ ಎಂದರು.
ಕ್ಯಾನ್ಸರ್ ಬರುವುದಕ್ಕಿಂತ ಮುಂಚಿತವಾಗಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ಉತ್ತಮ. ಜಾಗೃತಿಗೆ ಪುಸ್ತಕ ಕೈಪಿಡಿಯಾಗಲಿದೆ. ಯಾವುದೇ ರೀತಿಯ ಮಡಿವಂತಿಕೆ ಇಲ್ಲದೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ಹೇಳಿದರು.
ಸಾಹಿತ್ಯ ಆಸಕ್ತ ಬಳಗದ ಕಡಿದಾಳು ದಯಾನಂದ, ನೈಜಲಾ ರತ್ನಾಕರ, ಮೋಹನ್ ಮುನ್ನೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.