ಸಾಗರ: ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಪ್ರಮುಖರು ಬುಡಕಟ್ಟು ಹಾಗೂ ಇತರೆ ಅರಣ್ಯ ವಾಸಿಗಳ ಅರಣ್ಯಹಕ್ಕು ಕಾಯ್ದೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಶುಕ್ರವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಬುಡಕಟ್ಟು ಜನಾಂಗದವರಿಗೆ ಸರ್ಕಾರದ ಯೋಜನೆಯ ಪ್ರಕಾರ ಉಚಿತ ಪೌಷ್ಟಿಕ ಆಹಾರ ವಿತರಿಸಬೇಕು. ತಾಲ್ಲೂಕುವಾರು ಪ್ರತ್ಯೇಕವಾಗಿ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿಯನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಣ್ಣ ಹಸಲರು, ‘ಈ ಹಿಂದೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ, ಪಾದಯಾತ್ರೆ ನಡೆಸಲಾಗಿತ್ತು. ಆದಾಗ್ಯೂ ಸರ್ಕಾರ ಬೇಡಿಕೆಗಳ ಕುರಿತು ನಿರ್ಲಕ್ಷ್ಯಧೋರಣೆ ತಾಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ‘ಬುಡಕಟ್ಟು ಜನಾಂಗದವರು ಹೊಸದಾಗಿ ಯಾವುದೇ ಬೇಡಿಕೆಗಳನ್ನು ಕೇಳುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ ಅದನ್ನೂ ಈಡೇರಿಸಲು ಸಾಧ್ಯವಾಗದೆ ಇರುವುದು ವಿಷಾದನೀಯ’ ಎಂದು ದೂರಿದರು.
ಧರಣಿಗೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ‘ಬುಡಕಟ್ಟು ಜನಾಂಗದವರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪದೆ ಪದೆ ಧರಣಿ ನಡೆಸಬೇಕಾಗಿರುವುದು ದುರದೃಷ್ಟಕರ. ಸರ್ಕಾರ ಇವರ ಬೇಡಿಕೆಗಳ ಬಗ್ಗೆ ಕಿವಿಗೊಡುವ ಸೌಜನ್ಯ ತೋರಬೇಕು’ ಎಂದು ಒತ್ತಾಯಿಸಿದರು.
ಬುಡಕಟ್ಟು ಒಕ್ಕೂಟದ ಲಕ್ಷ್ಮಮ್ಮ, ಗಂಗಾಧರ್, ಕನ್ನಪ್ಪ, ಮಂಜುನಾಥ್, ಕಮಲಾಕರ, ನಾಗವೇಣಿ, ಶೈಲಜ, ಚಿತ್ರ, ಗೌರಮ್ಮ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಧು ಮಾಲತಿ, ಸುಮಂಗಲ ರಾಮಕೃಷ್ಣ, ನಾಗರಾಜ್ ಸ್ವಾಮಿ, ಅನ್ವರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.