ಶಿವಮೊಗ್ಗ: ಜೋಗ ಜಲಪಾತ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರು 72 ತಾಸುಗಳ ಒಳಗಿನ ಆರ್ಟಿ–ಪಿಸಿಆರ್ ಪರೀಕ್ಷೆಯ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.
ಕೋವಿಡ್ ಮೂರನೆ ಅಲೆ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಆ.5 ರಿಂದಲೇ ನಿರ್ಬಂಧಗಳನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಜೋಗ, ಆಗುಂಬೆ, ಸಕ್ರೇಬೈಲು, ಗಾಜನೂರು, ಭದ್ರಾ ಜಲಾಶಯ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಅರಣ್ಯ, ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಗಳ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಅಧಿಕ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದ್ದರು. ಕೋವಿಡ್ ನಿಯಮಗಳನ್ನು ಪಾಲಿಸದೆ ಭಾರಿ ಸಂಖ್ಯೆಯ ಜನರು ಒಂದೆಡೆ ಸೇರುವುದನ್ನು ನಿಯಂತ್ರಿಸಲು ಕಠಿಣ ನಿಯಮಗಳು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸುವ ಪ್ರಯಾಣಿಕರು ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೋವಿಡ್ ನೆಗೆಟಿವ್ ವರದಿ ನೀಡಬೇಕಿದೆ. ಜಿಲ್ಲೆಯ ವಸತಿಗೃಹಗಳು, ಹೋಟೆಲ್, ಹೋಂಸ್ಟೇ ಮತ್ತಿತರ ತಂಗುದಾಣಗಳಲ್ಲಿ ಉಳಿದುಕೊಳ್ಳಲೂ ಕೋವಿಡ್ ಪರೀಕ್ಷಾ ವರದಿ ಕಡ್ಡಾಯ.
ತ್ವರಿತ ವರದಿಗೆ ಆಗ್ರಹ: ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳು ಸ್ವಾಗತಾರ್ಹ. ಆದರೆ, ಆರ್ಟಿ–ಪಿಸಿಆರ್ ವರದಿ ನೀಡಲು ವಿಳಂಬವಾಗುತ್ತಿದೆ. ವರದಿ ಬರುವುದು ಮೂರು ದಿನಗಳಿಗಿಂತ ತಡವಾದರೆ 72 ತಾಸಿನ ಒಳಗಿನ ಪ್ರಮಾಣ ಪತ್ರ ಹಾಜರುಪಡಿಸುವುದು ಹೇಗೆ ಎಂದು ವಿವಿಧ ಸಂಘಟನೆಗಳು ಪ್ರಶ್ನಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.