ADVERTISEMENT

ತುಂಗಾ ನದಿ ಸೇತುವೆ ಮೇಲೆ ಬೋಗಿಗಳಿಂದ ಬೇರ್ಪಟ್ಟ ರೈಲಿನ ಎಂಜಿನ್: ತಪ್ಪಿದ ಅವಘಡ

ತಾಳಗುಪ್ಪ–ಮೈಸೂರು ಇಂಟರ್‌ಸಿಟಿ ರೈಲು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 13:55 IST
Last Updated 6 ಆಗಸ್ಟ್ 2025, 13:55 IST
   

ಶಿವಮೊಗ್ಗ: ಇಲ್ಲಿನ ತುಂಗಾ ನದಿ ಸೇತುವೆ ಮೇಲೆ ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಸಂಖ್ಯೆ–16205) ರೈಲಿನ ಬೋಗಿಗಳ ನಡುವಿನ ಸಂಪರ್ಕ ಕೊಂಡಿ (ಅನ್‌ ಕಪ್ಲಿಂಗ್) ಕಳಚಿ ಬುಧವಾರ ಸಂಜೆ ಆತಂಕ ಮೂಡಿಸಿತ್ತು.

ಸಂಜೆ 5 ಗಂಟೆಗೆ ಶಿವಮೊಗ್ಗ ರೈಲು ನಿಲ್ದಾಣದಿಂದ ಹೊರಟ ರೈಲು, ಗುಂಡಪ್ಪ ಶೆಡ್–ಸ್ಯಾಂಡಲ್ ಫ್ಯಾಕ್ಟರಿ ನಡುವಿನ ತುಂಗಾ ನದಿ ಸೇತುವೆಯ ಮೇಲೆ ತೆರಳುತ್ತಿದ್ದ ವೇಳೆ ಅದರ 16 ಬೋಗಿಗಳ ಪೈಕಿ ಆರು ಬೋಗಿಗಳು ಬೇರೆಯಾಗಿವೆ. ಸ್ವಲ್ಪ ದೂರ ತೆರಳಿ ಚಾಲಕ ರೈಲು ನಿಲ್ಲಿಸಿದ್ದಾರೆ. ವಿಷಯ ತಿಳಿದು ರೈಲ್ವೆ ಎಂಜಿನಿಯರಿಂಗ್ ವಿಭಾಗದ ತಂತ್ರಜ್ಞರು ಸ್ಥಳಕ್ಕೆ ತೆರಳಿ ಆರು ಬೋಗಿಗಳನ್ನು ಮರು ಜೋಡಿಸಿದರು.

ಸುರಕ್ಷತೆ ಖಾತರಿಯಾದ ನಂತರ ರೈಲು ಮುಂದಕ್ಕೆ ಚಲಿಸಿತು. ಸುಮಾರು 45 ನಿಮಿಷ ಕಾಲ ರೈಲು ಅಲ್ಲಿಯೇ ನಿಂತಿತ್ತು. ಭಾರೀ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಸೇತುವೆ ಮೇಲೆಯೇ ಈ ಘಟನೆ ನಡೆದಿದ್ದರಿಂದ ಪ್ರಯಾಣಿಕರು ತೀವ್ರ ಭಯ ಭೀತರಾಗಿದ್ದರು.

ADVERTISEMENT

ರೈಲು ಆಗಷ್ಟೇ ನಿಲ್ದಾಣ ಬಿಟ್ಟು ಕಡಿಮೆ ವೇಗದಲ್ಲಿ ಸಂಚರಿಸುತ್ತಿದ್ದ ಕಾರಣ ಭಾರೀ ಯಾವುದೇ ತೊಂದರೆ ಆಗಿಲ್ಲ. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ. ‍ಪ್ರಯಾಣಿಕರಿಗೆ ಧೈರ್ಯ ಹೇಳಿ ರೈಲನ್ನು ಬೀಳ್ಕೊಡಲಾಯಿತು ಎಂದು ರೈಲ್ವೆ ಭದ್ರತಾ ದಳದ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಬಿ.ಕೆ.ಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.