ADVERTISEMENT

ಅರಸಾಳಿನಲ್ಲಿ ರೈಲು ನಿಲುಗಡೆ: ನಾಗರಿಕರ ಹರ್ಷ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 15:36 IST
Last Updated 25 ಆಗಸ್ಟ್ 2023, 15:36 IST
ಟಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮದ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ತಡೆರಹಿತ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ ಹಾಗೂ ಸಂಸದರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ರೈಲು ಗಾಡಿಗೆ ಪೂಜೆ ಸಲ್ಲಿಸಿದರು.
ಟಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮದ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ತಡೆರಹಿತ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ ಹಾಗೂ ಸಂಸದರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ರೈಲು ಗಾಡಿಗೆ ಪೂಜೆ ಸಲ್ಲಿಸಿದರು.   

ರಿಪ್ಪನ್‌ಪೇಟೆ: ಎರಡು ದಶಕಗಳ ಗ್ರಾಮೀಣ ಜನರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದು, ಗುರುವಾರ ತಡೆರಹಿತ ರೈಲು ಅರಸಾಳಿನಲ್ಲಿ ನಿಲುಗಡೆ ಆಗುತ್ತಿದ್ದಂತೆ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡು ರೈಲು ಗಾಡಿಗೆ ಪೂಜೆ ಸಲ್ಲಿಸಿದರು.

ಸಮೀಪದ ಅರಸಾಳು ರೈಲು ನಿಲ್ದಾಣ ಬ್ರಿಟಿಷ್ ಆಡಳಿತದಲ್ಲಿ (1935) ನಿರ್ಮಾಣಗೊಂಡಿದ್ದು, ನಾಗರಿಕ ಹಾಗೂ ಸರಕು ಸಾಗಣೆಯ ರೈಲುಗಳು ಸಂಚರಿಸುತ್ತಿದ್ದ ಕಾಲದಲ್ಲಿ ಇಲ್ಲಿ ರೈಲು ನಿಲಗಡೆಯಾಗುತ್ತಿದ್ದವು. ಕಾಲಕ್ರಮೇಣ ಶಿವಮೊಗ್ಗ – ತಾಳಗುಪ್ಪ ರೈಲ್ವೆ ಪ್ಲಾಟ್‌ಫಾರಂ ಬ್ರಾಡ್‌ಗೇಜ್‌ಗೆ ಪರಿವರ್ತನೆ ಹೊಂದಿದ ನಂತರ ಅರಸಾಳು, ಕೆಂಚನಾಲ ರೈಲು ನಿಲುಗಡೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸ್ಥಳೀಯ ನಾಗರಿಕರಿಗೆ ಅನನುಕೂಲವಾಗಿತ್ತು.

‘ಸುತ್ತಮುತ್ತಲಿನ ಹಲವಾರು ಸಂಘ ಸಂಸ್ಥೆಗಳು, ನಾಗರಿಕ ಹೋರಾಟ ಸಮಿತಿಗಳು ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಆಗ್ರಹಿಸಿದ್ದವು. ನಿರಂತರ ಹೋರಾಟಕ್ಕೆ ಪ್ರತಿಫಲ ಈಗ ದೊರಕಿದೆ’ ಎಂದು ರೈಲ್ವೆ ಹೋರಾಟದ ಪ್ರಮುಖ ರೂವಾರಿ ಹಾಗೂ ಹಿರಿಯ ಪತ್ರಕರ್ತ ಜಿ.ಎಸ್. ರಂಗನಾಥ್ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಹೊಂಬುಜ ಶ್ರೀಗಳ ಸಂತಸ: ‘ಹೊರ ರಾಜ್ಯ ಹಾಗೂ ಹೊರದೇಶಗಳಿಂದ ಹೊಂಬುಜ, ಕೊಲ್ಲೂರು, ಶೃಂಗೇರಿ, ಹೊರನಾಡು ಪುಣ್ಯಕ್ಷೇತ್ರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಚರಿಸುವ ಯಾತ್ರಾರ್ಥಿಗಳಿಗೆ ಅರಸಾಳು ರೈಲು ನಿಲ್ದಾಣ ಬಹು ಉಪಯುಕ್ತ. ಇಲ್ಲಿ ರೈಲು ನಿಲುಗಡೆಗೆ ಕಾರಣಕರ್ತರಾದ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು’ ಎಂದು ಹೊಂಬುಜ ಶ್ರೀಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.