
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (ವಿಐಎಸ್ಎಲ್) ಅರಣ್ಯೀಕರಣ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಹೇಳಿದರು.
ಕಾರ್ಖಾನೆಯು ಹಮ್ಮಿಕೊಂಡಿರುವ ‘ಹಸಿರೀಕರಣದೆಡೆಗೆ..’ ಮತ್ತು ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾಗವಾಗಿ ಅರಣ್ಯ ಇಲಾಖೆಗೆ ಹೊಂಗೆ, ಹಲಸು, ಮಾವು ಮತ್ತು ಜಂಬೂನೇರಳೆಯ 1,100 ಸಸಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಖಾನೆಯ ಆವರಣ ಮತ್ತು ನಗರ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ವಿಐಎಸ್ಎಲ್ ಕೊಡುಗೆ ನೀಡಿದೆ. ಗಣರಾಜ್ಯೋತ್ಸವ, ಸೈಲ್ ದಿನಾಚರಣೆ, ಸಂಸ್ಥಾಪಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ನುಗ್ಗೆ, ಪಪ್ಪಾಯ, ಕರಿಬೇವಿನ ಸಸಿಗಳನ್ನು ಉಚಿತವಾಗಿ ವಿತರಿಸಿದೆ. ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಆರೋಗ್ಯ ಉಚಿತ ತಪಾಸಣಾ ಶಿಬಿರಗಳಲ್ಲಿ ಉಚಿತವಾಗಿ ಬೀಜ ಹಾಗೂ ಸಸಿಗಳನ್ನು ವಿತರಿಸಿದೆ. ಈ ವರ್ಷ 8,500ಕ್ಕೂ ಹೆಚ್ಚು ಸಸಿ ಹಾಗೂ 3,000ದಷ್ಟು ಬೀಜಗಳನ್ನು ವಿತರಿಸಿರುವ ಕಾರ್ಖಾನೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಅರಣ್ಯ ಇಲಾಖೆಗೆ ಸಸಿಗಳನ್ನು ಹಸ್ತಾಂತರಿಸಿದರು.
ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕ ಕೆ.ಎಸ್. ಸುರೇಶ್, ಮಹಾಪ್ರಬಂಧಕರಾದ ಎಲ್. ಪ್ರವೀಣ್ ಕುಮಾರ್, ಮುತ್ತಣ್ಣ ಸುಬ್ಬರಾವ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಕುಮಾರ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ರತ್ನಪ್ರಭಾ, ಉಮರ್ ಭಾಷಾ, ಪ್ರದೀಪ್ ಎಂ.ಎಸ್., ರಾಘವೇಂದ್ರ ಕೆ.ಬಿ., ಬಿ.ಆರ್ ದಿನೇಶ್ ಕುಮಾರ್, ಶಫಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.