ಶಿವಮೊಗ್ಗ: ಎರಡು ತಿಂಗಳಿನಿಂದ ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯಲ್ಲೇ ಸಿಲುಕಿದ್ದ ಪಶ್ಚಿಮ ಬಂಗಾಳದ 120ಕುಶಲಕರ್ಮಿಗಳ ನೆರವಿಗೆ ಜಿಲ್ಲಾಡಳಿತ ಧಾವಿಸಿದೆ.
ಬಟ್ಟೆಗಳ ಮೇಲೆ ಚಿತ್ತಾರ ಮೂಡಿಸುವ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರು ನಗರದ ಹಲವೆಡೆ ನೆಲೆಸಿದ್ದರು. ಕೊರೊನಾ ನಿರ್ಬಂಧಗಳ ನಂತರ ಕೆಲಸವಿಲ್ಲದೇ ಪರಿತಪ್ಪಿಸಿದ್ದರು. ಸಂಘ, ಸಂಸ್ಥೆಗಳು, ನಗರ ಪಾಲಿಕೆ ನೀಡಿದ ಆಹಾರ ಪದಾರ್ಥಗಳ ನೆರವಿನಲ್ಲೇ ಎರಡು ತಿಂಗಳು ಜೀವನ ನಡೆಸಿದ್ದರು. ಮೇ 3ರಂದು ಆನ್ಲೈನ್ ಮೂಲಕ ಅಂತರರಾಜ್ಯ ಪಾಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲಾಡಳಿತ ಹೊರಡಲು ಅನುಮತಿ ನೀಡಿದೆ. ಆದರೆ, ತವರು ರಾಜ್ಯದ ಅನುಮತಿ ಸಿಗದೇ ಹೊರಡಲು ಸಾಧ್ಯವಾಗಿರಲಿಲ್ಲ. ಈಗ ಜಿಲ್ಲಾಡಳಿತವೇ ವಿಶೇಷ ಆಸಕ್ತಿ ವಹಿಸಿ ಅವರಿಗೆ ಅನುಮತಿ ದೊರಕಿಸುತ್ತಿದೆ.
‘ಪಶ್ಚಿಮ ಬಂಗಾಳದ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅಗತ್ಯ ದಾಖಲೆ ರವಾನಿಸಿದ್ದೇವೆ. ಎರಡು ಮೂರು ದಿನಗಳಲ್ಲಿ ಅನುಮತಿ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.
ಜಿಲ್ಲಾಡಳಿತ ನಮ್ಮೂರಿಗೆ ತೆರಳಲು ಸಾಕಷ್ಟು ಅನುಕೂಲ ಮಾಡಿಕೊಡುತ್ತಿದೆ. ಅನುಮತಿ ಸಿಕ್ಕ ತಕ್ಷಣ ರೈಲಿನಲ್ಲಿ ಊರಿಗೆ ಹೋಗುತ್ತೇವೆ. ಅಲ್ಲೇ ನೆಮ್ಮದಿಯ ಬದುಕು ಕಂಡುಕೊಳ್ಳುತ್ತೇವೆ’ ಎಂದು ಕುಶಲಕರ್ಮಿಗಳು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.