
ತೀರ್ಥಹಳ್ಳಿ: ಕಾಡುಪ್ರಾಣಿಗಳು ಈಚೆಗೆ ನಾಡಿನ ಕಡೆಗೆ ಧಾವಿಸುತ್ತಿವೆ. ಕಾಡುಕೋಣದ ಹಾವಳಿಯಿಂದಾಗಿ ತೆನೆಹೊತ್ತ ಭತ್ತದ ಗದ್ದೆಗಳು ನಾಶವಾಗುತ್ತಿದೆ.
ಅಡಿಕೆ ಬೆಳೆಯ ಧಾರಣೆಯ ಕಾರಣದಿಂದ ಬಹುತೇಕ ರೈತಾಪಿ ವರ್ಗ ಭತ್ತ ಬೆಳೆಯುವಲ್ಲಿ ನಿರಾಸಕ್ತಿ ತಾಳಿದೆ. ಹೀಗಿರುವಾಗಲೂ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 6,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕಟಾವು ಸಂದರ್ಭ ಹತ್ತಿರಗೊಳ್ಳುತ್ತಿದ್ದಂತೆ ಕಾಡುಪ್ರಾಣಿಗಳು ನೇರವಾಗಿ ಭತ್ತದ ಗದ್ದೆಗಳಿಗೆ ನುಗ್ಗುತ್ತಿದ್ದು ರೈತರು ಕಂಗೆಟ್ಟಿದ್ದಾರೆ.
ತಾಲ್ಲೂಕಿನ 247 ಗ್ರಾಮಗಳ ಪೈಕಿ ಬಹುತೇಕ ಗ್ರಾಮಗಳು ಸೋಮೇಶ್ವರ, ಮೂಕಾಂಬಿಕಾ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ, ಕುಪ್ಪಳ್ಳಿ ಜೈವಿಕ ಅರಣ್ಯ ಧಾಮಕ್ಕೆ ಹೊಂದಿಕೊಂಡಿದೆ. ಈ ಪ್ರದೇಶದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆನೆ, ಹುಲಿ, ಚಿರತೆ, ಕಾಡುಕೋಣ, ಮೊಲ, ಹಂದಿ, ಜಿಂಕೆ, ಕಡವೆ, ನವಿಲು, ಮಂಗ ಪ್ರತಿನಿತ್ಯ ಸಾಗುವಳಿ ಜಮೀನಿಗೆ ಹಾನಿಯುಂಟು ಮಾಡುತ್ತಿವೆ.
ಮಂಡಗದ್ದೆ, ಮೃಗಾವಧೆ, ಹಣಗೆರೆ, ಕನ್ನಂಗಿ ಭಾಗದಲ್ಲಿ ಕಾಡಾನೆ ಸಂಚಾರ ಹೆಚ್ಚುತ್ತಿದೆ. ಪಟ್ಟಣಕ್ಕೆ ಹೊಂದಿಕೊಂಡ ಹೊದಲ ಅರಳಾಪುರ, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಚಿರತೆ ರಾತ್ರಿ ಸಂಚರಿಸುತ್ತಿದೆ. ಊರೊಳಗೆ ಸಲೀಸಾಗಿ ಸಿಗುವ ನಾಯಿ, ದನ, ಕೋಳಿ, ಬೆಕ್ಕು, ಎಮ್ಮೆ ಮುಂತಾದ ಪ್ರಾಣಿಗಳ ಮೇಲೆ ದಾಳಿ ನಡೆಸುವ ಕಯಾಲಿ ಬೆಳೆಸಿಕೊಳ್ಳುತ್ತಿದೆ.
ಪ್ರವಾಸಿಗರು, ವಾಹನ ಸವಾರರು ನೀಡುತ್ತಿರುವ ಆಹಾರದ ಕಾರಣದಿಂದ ರಸ್ತೆ ಬದಿಯಲ್ಲಿ ಮಂಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದನ್ನೇ ರೂಢಿ ಮಾಡಿಕೊಂಡ ಮಂಗಗಳು ಮನೆಗಳಿಗೆ ನುಗ್ಗುವ ಜೊತೆಗೆ ತೋಟಗಳಿಗೆ ದಾಳಿ ಇಡುತ್ತಿವೆ. ನವಿಲುಗಳ ಸಂಖ್ಯೆ ಹೆಚ್ಚಾಗಿದ್ದು ಭತ್ತದ ಪೈರುಗಳನ್ನು ತಿನ್ನುತ್ತಿವೆ. ಹಾಡ್ಯ, ಬೇಣಗಳ ಸಾಲಿನಲ್ಲಿರುವ ಗದ್ದೆಗಳನ್ನು ಕಾಡುಪ್ರಾಣಿಗಳಿಗೆ ಮೀಸಲಿಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಾಣಿ ಓಡಿಸಲು ಬ್ಯಾಂಡ್ ಸೆಟ್, ಮೈಕ್ ಬಳಕೆ;
ಒಂದು ಎಕರೆ ತರಿ ಭೂಮಿಯಲ್ಲಿ ಕಾಲು ಭಾಗದ ಲಾಭ ಕೂಡ ಸಿಗುತ್ತಿಲ್ಲ. ಮುಳ್ಳುಹಂದಿ, ಕಾಡುಹಂದಿ, ನವಿಲು, ಕಾಡುಕೋಣಗಳು ಗದ್ದೆಗಳಿಗೆ ದಾಳಿ ಇಡುತ್ತಿವೆ. ತೆಂಗಿನಮರ, ಚಿಕ್ಕು, ಬಾಳೆಕಾಯಿ, ಅಡಿಕೆ ಕಾಯಿಗಳಿಗೆ ಕೆಂದಳಿಲು, ಮಂಗಗಳು ಸಂಚಕಾರ ತರುತ್ತಿವೆ. ಹೀಗಾಗಿ ಹಲವು ಗ್ರಾಮದಲ್ಲಿ ಬ್ಯಾಂಡ್ ಸೆಟ್, ದೊಡ್ಡ ಗಾತ್ರದ ಮೈಕ್ಗಳನ್ನು ಬಳಸಿ ಪ್ರಾಣಿಗಳನ್ನು ರಾತ್ರಿ ಓಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಆದರೂ ಫಸಲು ಮಾತ್ರ ಕೈಸೇರಿತ್ತಿಲ್ಲ ಎಂದು ತಿಮ್ಮಪ್ಪ ಟಿ.ಆರ್. ಬೇಸರ ವ್ಯಕ್ತಪಡಿಸಿದ್ದಾರೆ.
ರೈತರನ್ನು ಒಕ್ಕಲೆಬ್ಬಿಸುವ ಉದ್ದೇಶವಿದ್ದರೆ ಪರಿಹಾರ ನೀಡಿ ರಾಜ್ಯ, ಕೇಂದ್ರ ಸರ್ಕಾರಗಳು ಆದೇಶ ಹೊರಡಿಸಲಿ. ಕಾಡು ಪ್ರಾಣಿಗಳ ಲೂಟಿಯಿಂದ ಕೃಷಿ ಕಗ್ಗಂಟಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಬಂದೂಕು ಬಳಕೆಗೆ ಸಿಗದ ಪರವಾನಗಿ
ಫಸಲು ರಕ್ಷಿಸುವ ಉದ್ದೇಶದಿಂದ ನೀಡುತ್ತಿದ್ದ ಬಂದೂಕು ಪರವಾನಗಿಯನ್ನು ಈಗ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ರೈತರಿಗೆ ನೀಡುತ್ತಿಲ್ಲ. ತಂದೆಯ ಪರವಾನಗಿ ಮಕ್ಕಳ ಹೆಸರಿಗೆ ವರ್ಗಾವಣೆ ಆಗುತ್ತಿಲ್ಲ. ಹೊಸ ಪರವಾನಗಿಗೆ ಅವಕಾಶ ನೀಡುತ್ತಿಲ್ಲ. ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ. ವನ್ಯಜೀವಿಗಳ ಪ್ರಾಣ ಹಾನಿಯಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕು. ಮಾನವ– ವನ್ಯಜೀವಿಗಳ ಸಂಘರ್ಷ ಮಿತಿಮೀರಿದೆ. ಅರಣ್ಯ ಇಲಾಖೆ ಪ್ರಾಣಿಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಕೃಷಿಕ ಪುಟ್ಟೋಡ್ಲು ರಾಘವೇಂದ್ರ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.