
ಶಿವಮೊಗ್ಗ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹಳ್ಳಿಗಳಲ್ಲಿ ಕಾರ್ಯಶೀಲವಾಗಿರುವ ಸ್ವಸಹಾಯ ಸ್ತ್ರೀಶಕ್ತಿ ಸಂಘಗಳು ಪ್ರಮುಖ ಪಾತ್ರ ವಹಿಸಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರು ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ನೂತನ ಎನ್.ಸಿ.ಸಿ ಘಟಕದ ಉದ್ಘಾಟನೆ ಹಾಗೂ ವಾಣಿಜ್ಯ ವೇದಿಕೆ, ಮಹಿಳಾ ಸಬಲೀಕರಣ ಘಟಕಗಳಿಂದ ‘ಮಹಿಳೆ ಮತ್ತು ಸ್ವಾವಲಂಬನೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಸ್ತ್ರೀಶಕ್ತಿ ಸಂಘಗಳನ್ನು ಹೆಣ್ಣು ಮಕ್ಕಳು ಸಧೃಡವಾಗಿ ಸಂಘಟಿಸುತ್ತಿದ್ದಾರೆ. ಸಾಲ ನೀಡುವ ಮತ್ತು ಪಾವತಿಸುವ ಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕೃಷಿಯ ಜೊತೆಗೆ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಇಂತಹ ಅನೇಕ ಉದಾಹರಣೆಗಳು ಮಹಿಳೆಯರಲ್ಲಿರುವ ಆಡಳಿತ ಕೌಶಲಕ್ಕೆ ನಿದರ್ಶನವಾಗಿದೆ ಎಂದರು.
ಮಹಿಳೆಯರು ವಿವಿಧ ಕ್ಷೇತ್ರಗಳ ಮುಂಚೂಣಿ ನಾಯಕರಾಗಿ ರೂಪಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ. ಹತ್ತನೇ ತರಗತಿಯ ನಂತರ ಮದುವೆ, ತಾಯ್ತನ ಎಂಬ ಸೀಮಿತತೆಯ ಕಾಲ ಬದಲಾಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಆದ ಪರಿವರ್ತನೆಯಿಂದ, ಐಟಿ ಬಿಟಿ ರಂಗದಲ್ಲಿ ಅವರ ದುಡಿಮೆ ಸಾಧ್ಯವಾಗಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಪ್ರಾಂಶುಪಾಲ ಆರ್.ಎಂ.ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಓಂಕಾರಪ್ಪ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಆಶಾಲತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.