ಶಿವಮೊಗ್ಗ:ಮಾಧ್ಯಮಗಳು ಭ್ರಷ್ಟಾಚಾರವಿಲ್ಲದೆ, ಚಾರಿತ್ರ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಸಮಾಜಕ್ಕೆ ಆಸ್ತಿಯಾಗಲು ಸಾಧ್ಯ ಎಂದುಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೀಡಿಯಾ ಹೌಸ್ ಉದ್ಘಾಟಿಸಿ ಮಾತನಾಡಿದರು.
ಸರ್ವಾಧಿಕಾರ ಇದ್ದರೆ ಅದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ವಾಧಿಕಾರನಡೆಸಿದವರೆಲ್ಲಾ ಮಣ್ಣು ಮುಕ್ಕಿ ಹೋಗಿದ್ದಾರೆ. ಅದೇ ರೀತಿಯಲ್ಲಿ ಪತ್ರಿಕೆಗಳೂ ಒಬ್ಬ ವ್ಯಕ್ತಿ, ಪಕ್ಷದ ಮುಖವಾಣಿಯಾಗಬಾರದು ಎಂದರು.
ಮೀಡಿಯಾ ಹೌಸ್ ನಾಮಫಲಕ ಅನಾವರಣ ಮಾಡಿದ ಸಂಸದ ಬಿ.ವೈ.ರಾಘವೇಂದ್ರ, ‘ಯಾವುದೇ ಕ್ಷೇತ್ರಗಳಲ್ಲಿ ಸಂಘಟನೆ ಪ್ರಬಲವಾಗಿದ್ದರೆ ಸಮರ್ಥವಾಗಿ ಕೆಲಸ ಮಾಡಬಹುದಾಗಿದೆ. ಇದರಿಂದಾಗಿ ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕಿದೆ. ಯಾರಿಗೂ ಪ್ರತಿಷ್ಠೆ ಸರಿಯಲ್ಲ’ ಎಂದರು.
ಈ ಸಂಘ ಇಂದಿನದಲ್ಲ. ಪತ್ರಕರ್ತರ ಸಂಘಕ್ಕೆ ಶತಮಾನದ ಇತಿಹಾಸವಿದೆ. ಪತ್ರಕರ್ತರ ಸಂಘಟನೆಗೆ ಶಿಸ್ತು ಮತ್ತು ಬದ್ಧತೆ ಇದೆ. ಡಿ.ವಿ.ಗುಂಡಪ್ಪ ಹುಟ್ಟು ಹಾಕಿದ ಸಂಘ ಎಂದುರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ವ್ಯಕ್ತಿ ಮುಖ್ಯವಲ್ಲ. ಸಂಘಟನೆ ಮುಖ್ಯ. ಕೆಲವರ ಸ್ವಾರ್ಥದಿಂದ ಸಂಘಟನೆಯಲ್ಲಿ ಆಗಾಗ ಕೆಲವೊಂದು ಬೆಳವಣಿಗೆ ಆಗುತ್ತಿರುತ್ತವೆ. ಒಬ್ಬ ವ್ಯಕ್ತಿಗೆ ಸಂಘಟನೆ ಅಡಿಯಿಡುವ ಪ್ರಶ್ನೆಯೇ ಇಲ್ಲ. ವಿಶ್ವಾಸಾರ್ಹತೆ ಇರುವ ಪತ್ರಕರ್ತರನ್ನು ಬೆಳೆಸುವ ಉದ್ದೇಶ ಸಂಘಕ್ಕಿದೆ ಎಂದರು.
ರಾಜ್ಯ ಸಂಘದ ಪದಾಧಿಕಾರಿಗಳಾದ ಅಜ್ಜಮಾಡು ರಮೇಶ್ ಕುಟ್ಟಪ್ಪ, ಸೋಮಶೇಖರ್ ಕರಗೋಡು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ಎಎಪಿ ಜಿಲ್ಲಾಧ್ಯಕ್ಷ ಮನೋಹರ್ ಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಜಿ.ಪದ್ಮನಾಭ, ರಾಷ್ಟ್ರೀಯ ಪತ್ರಿಕಾ ಮಂಡಳಿ ನಿರ್ದೇಶಕ ಭಂಡಿಗಡಿ ನಂಜುಂಡಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.