ADVERTISEMENT

ಶಿವಮೊಗ್ಗ: ಪುರುಷೋತ್ತಮ ಬಿಳಿಮಲೆ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:55 IST
Last Updated 21 ನವೆಂಬರ್ 2025, 5:55 IST
ಸಾಗರದಲ್ಲಿ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿಕೆ ಖಂಡಿಸಿ ಗುರುವಾರ ಪ್ರತಿಭಟನೆ ನಡೆಯಿತು.
ಸಾಗರದಲ್ಲಿ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿಕೆ ಖಂಡಿಸಿ ಗುರುವಾರ ಪ್ರತಿಭಟನೆ ನಡೆಯಿತು.   

ಸಾಗರ: ‘ಬಹುತೇಕ ಯಕ್ಷಗಾನ ಕಲಾವಿದರು ಸಲಿಂಗಕಾಮಿಗಳು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿಕೆ ಖಂಡಿಸಿ ಇಲ್ಲಿನ ಯಕ್ಷಗಾನ ಅಭಿಮಾನಿ ಬಳಗದ ವತಿಯಿಂದ ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

‘ಬಿಳಿಮಲೆ ಅವರು ನೀಡಿರುವ ಹೇಳಿಕೆ ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರವಲ್ಲ, ಕಲೆಗೂ ಮಾಡಿರುವ ಅವಮಾನವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಬಿಳಿಮಲೆ ಅವರು ಸಂಸ್ಕಾರಯುತ ಕಲೆಯಾಗಿರುವ ಯಕ್ಷಗಾನಕ್ಕೆ ಅಪಚಾರ ಎಸಗಿದ್ದಾರೆ’ ಎಂದು ಯಕ್ಷಗಾನ ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ದೂರಿದರು.

‘ಯಕ್ಷಗಾನ ಕಲಾವಿದರನ್ನು, ಕಲೆಯನ್ನು ಅವಹೇಳನ ಮಾಡುವುದು ಎಂದರೆ ಅದು ಕನ್ನಡ ಸಂಸ್ಕೃತಿಯನ್ನು ಅವಹೇಳನ ಮಾಡಿದಂತೆ ಎಂಬ ಪ್ರಜ್ಞೆ ಬಿಳಿಮಲೆ ಅವರಿಗೆ ಇರಬೇಕಿತ್ತು. 600 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯ ಕಲಾವಿದರ ಕುರಿತು ಹಗುರವಾಗಿ ಮಾತನಾಡುವುದು ಶೋಭೆ ತರುವ ಸಂಗತಿಯಲ್ಲ’ ಎಂದು ದೂರಿದರು.

‘ಯಕ್ಷಗಾನ ಕಲಾವಿದರನ್ನು ಮಾನಸಿಕವಾಗಿ ಕುಗ್ಗಿಸುವ ರೀತಿಯಲ್ಲಿ ಬಿಳಿಮಲೆ ಅವರು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಕ್ಷಮೆಗೆ ಕೂಡ ಅರ್ಹವಾದುದ್ದಲ್ಲ. ರಾಜ್ಯ ಸರ್ಕಾರ ಕೂಡಲೇ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಬೇಕು’ ಎಂದು ಯಕ್ಷಗಾನ ಕಲಾವಿದ ಶ್ರೀಧರ ಗೀಜಗಾರು ಒತ್ತಾಯಿಸಿದರು.

ಪ್ರಮುಖರಾದ ಸಂಪ ಲಕ್ಷ್ಮಿನಾರಾಯಣ, ಶುಂಠಿ ಸತ್ಯನಾರಾಯಣ ಭಟ್, ವಿಜಯ ಹೆಗಡೆ, ಪ್ರಶಾಂತ್ ಹೆಗಡೆ, ಕೆ.ಆರ್.ಗಣೇಶ್ ಪ್ರಸಾದ್, ಹಿತಕರಜೈನ್, ರಾಘವೇಂದ್ರ ಬೆಳೆಯೂರು, ಚಂದ್ರಮೋಹನ್ ಭಟ್, ಮೈತ್ರಿ ಪಾಟೀಲ್, ಮಧುರಾ ಶಿವಾನಂದ್, ಸಂತೋಷ್ ಆರ್.ಶೇಟ್, ಪ್ರಶಾಂತ್ ಕೆ.ಎಸ. ಸುಪ್ರತೀಕ್ ಭಟ್, ದತ್ತಾತ್ರೇಯ ಹೆಗಡೆ ಮಡಸೂರು, ಗಣೇಶ್, ಪ್ರಸನ್ನ, ದೇವೇಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.