ADVERTISEMENT

ಅಕ್ಕ-ತಂಗಿ ಕೆರೆ ಸೇರುತ್ತಿದೆ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 9:00 IST
Last Updated 1 ಮಾರ್ಚ್ 2012, 9:00 IST

ತುಮಕೂರು: ನಗರದ ಹೊಸಳಯ್ಯನತೋಟ (ಮಂಜುನಾಥನಗರ) ಬಡಾವಣೆಯಲ್ಲಿ ಒಳಚರಂಡಿ ನೀರಿನ ಚೇಂಬರ್ ಒಡೆದು ಅಕ್ಕತಂಗಿಯರ ಕೆರೆಯ ಅಂಗಳಕ್ಕೆ ಕಲುಷಿತ ನೀರು ಸೇರುತ್ತಿದೆ.

ದೇವರಾಯಪಟ್ಟಣ, ಬಟವಾಡಿ ಸೇರಿದಂತೆ ವಿವಿಧ ಬಡಾವಣೆಗಳ ಚರಂಡಿ ನೀರು ಕೆರೆಗೆ ಸೇರುವ ಸ್ಥಳದಲ್ಲಿ ಕೆಟ್ಟ ವಾಸನೆ ಇದೆ. ಸ್ಥಳೀಯರು ವಾಸ ಮಾಡುವುದೇ ಕಷ್ಟವಾಗಿದೆ ಎಂದು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಸೈಯದ್ ಅಲ್ತಾಫ್ ಹಾಗೂ ಸ್ಥಳೀಯರು ದೂರಿದ್ದಾರೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಒಡೆದಿದ್ದ ಒಳಚರಂಡಿ ಚೇಂಬರ್‌ಗೆ ಆಡುವ ಮಗು ಬಿದ್ದು ಸಾವನ್ನಪ್ಪಿತ್ತು. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಚೇಂಬರ್ ದುರಸ್ತಿಪಡಿಸುವಂತೆ ನಗರಸಭೆಗೆ ಸೂಚಿಸಿದ್ದರು. ಇದೀಗ ಅದೇ ಪ್ರದೇಶದ ಮತ್ತೊಂದು ಚೇಂಬರ್ ಒಡೆದಿರುವುದು ವಿಪರ್ಯಾಸ.

ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರು ಪೂರೈಕೆಗೆ ಕೆರೆಯ ಸುತ್ತ ಕೊರೆದಿರುವ ಕೊಳವೆಬಾವಿಗಳಲ್ಲಿ ಕಲುಷಿತ ನೀರು ಬರುತ್ತದೆ. ಸ್ಥಳೀಯ ನಗರಸಭೆ ಸದಸ್ಯರು ನಗರಸಭೆ ಉಪಾಧ್ಯಕ್ಷ ಅಸ್ಲಾಂಪಾಷ ಅವರನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿ ವಿವರಿಸಿದರೂ ಪ್ರಯೋಜನವಾಗಿಲ್ಲ.

ಮತ್ತೊಂದು ಮಗು ಬಲಿಯಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನಗರಸಭೆಗೆ ಅಗತ್ಯ ಸೂಚನೆ ನೀಡಬೇಕು. ಇಲ್ಲದಿದ್ದರೆ ಸಮಿತಿ ಬೀದಿಗಿಳಿದು ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.