ADVERTISEMENT

ಆದರ್ಶ- ಮೌಲ್ಯ ಸಂರಕ್ಷಣೆಗೆ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮೇ 2012, 7:15 IST
Last Updated 18 ಮೇ 2012, 7:15 IST

ಕೊರಟಗೆರೆ: ಸಮಾಜದ ಎಲ್ಲ ರಂಗಗಳಲ್ಲಿ ಆದರ್ಶ, ಮೌಲ್ಯಗಳ ಅಗತ್ಯವಿದೆ. ಅಂತಹ ಆದರ್ಶ, ಮೌಲ್ಯಗಳನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಬಾಳೆ ಹೊನ್ನೂರು ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ನಡೆದ 6ನೇ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅತೃಪ್ತಿ, ಅಸಮಾಧಾನ ದಿಂದ ತತ್ತರಿಸುತ್ತಿರುವ ಪ್ರಸ್ತುತ ಧರ್ಮ ಒಂದೇ ಆಶಾಕಿರಣ. ಅಸ್ಪೃಶ್ಯತೆ ನಿವಾರಣೆ, ಮಹಿಳೆ ಯರಿಗೆ ಧಾರ್ಮಿಕ ಸ್ವಾತಂತ್ರ, ಧೀನದಲಿತರ ಉದ್ಧಾರ, ಜನಸಾಮಾನ್ಯರ ನೋವು ನಿವಾರಿಸುವ ನಿಟ್ಟಿನಲ್ಲಿ  ಮಠಮಾನ್ಯಗಳು ಕಾರ್ಯನಿರ್ವ ಹಿಸಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಮಾಜ ಬದಲಾಗುತ್ತಿದೆ. ಮನುಷ್ಯ ಜೀವನ ಸಾರ್ಥಕವಾಗಲು ಸದ್ಗುಣ, ಪ್ರಾಮಾಣಿಕತೆ, ಸಮಾಜದ ಬಗ್ಗೆ ಕಳಕಳಿ, ಗುರುಹಿರಿಯರಲ್ಲಿ ಭಕ್ತಿ, ಗೌರವ ಭಾವನೆಗಳನ್ನು ಬೆಳಿಸಿಕೊಳ್ಳಬೇಕು ಎಂದರು.

ಪೀಠಾಧ್ಯಕ್ಷರಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಮಾಲಯದಲ್ಲಿ ಸಿಗುವಂತ ಎಲ್ಲ ಗಿಡಮೂಲಿಕೆಗಳು ಸಿದ್ದರಬೆಟ್ಟದಲ್ಲಿ ಸಿಗುತ್ತಿವೆ. ಆದರೂ ಆ ಬಗ್ಗೆ ಜನರಿಗೆ ಅರಿವಿಲ್ಲ. ಉಳಿಸುವ ಮನೋಭಾವವೂ ಇಲ್ಲ. ಈ ನಿಟ್ಟಿನಲ್ಲಿ ಇಲ್ಲಿನ ಸಸ್ಯ ಸಂರಕ್ಷಣೆಗೆ ಆಯುರ್ವೇದ ಚಿಕಿತ್ಸಾ ಕೇಂದ್ರ ತೆರೆಯುವ ಯೋಜನೆ ಇದೆ. ಎಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ವಿ.ಪಾತರಾಜು, ಬಿ.ಎಚ್.ಅನಿಲ್‌ಕುಮಾರ್ ಮಾತನಾಡಿದರು. ಮರುಳಾರಾಧ್ಯ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಡಿ.ಪ್ರಸನ್ನಕುಮಾರ್, ಪಿ.ಆರ್.ಸುಧಾಕರ್‌ಲಾಲ್, ದಾಕ್ಷಾಯಿಣಿ ರಾಜಣ್ಣ, ಪ್ರೇಮ ಮಹಾಲಿಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಿ.ಎಲ್.ಹನುಮಂತರಾಯಪ್ಪ, ಜಿ.ಎಸ್. ರವಿಕುಮಾರ್, ಮುಖಂಡರಾದ ಬೆಂಡೋಣೆ ಜಯರಾಮ್, ಎಂ.ಶಿವಾನಂದ, ಪರ್ವತಯ್ಯ, ಇನ್ಸ್‌ಪೆಕ್ಟರ್ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ಸಂಪ್ರದಾಯ ಮೆರೆದ ಮಹಿಳೆಯರು
ತೋವಿನಕೆರೆ: ಗ್ರಾಮೀಣ ಮಹಿಳೆಯರು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದರೂ ಹಳೆ ಸಂಪ್ರದಾಯವನ್ನು ಅನುಸರಿಸಿದ ಘಟನೆ ಸಿದ್ದರಬೆಟ್ಟದಲ್ಲಿ ಗುರುವಾರ ನಡೆಯಿತು.ಮದುವೆಯ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಮೂಹೂರ್ತ ಮುಗಿದ ನಂತರ ಮಡಿಲಕ್ಕಿ, ಅರಿಶಿಣ, ಕುಂಕುಮ, ಹಾಗೂ ಹೂಗಳನ್ನು ನೀಡುವುದು ಅನಾದಿಕಾಲದಿಂದಲೂ ನಡೆದು ಕೊಂಡುಬಂದ ಸಂಪ್ರದಾಯ. ಇತ್ತೀಚಿಗೆ ಮದುವೆಗೆ ಲಗ್ನಪತ್ರಿಕೆ ಕೊಟ್ಟು ಕರೆಯುವ ಸಂದರ್ಭದಲ್ಲೆ ಮಡಿಲಕ್ಕಿ, ಕರಿದ ತಿಂಡಿಗಳು, ಉಡುಗೊರೆ, ಅರಿಶಿಣ ಕುಂಕುಮ ಕೊಡುವುದು ಪ್ರಾರಂಭವಾಗಿದೆ.

ಸಿದ್ದರಬೆಟ್ಟದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದ ಕುಟುಂಬಗಳು ತನ್ನ ಸಂಬಂಧಿಕರಿಗೆ ಅರಿಶಿಣ ಅಚ್ಚಿ, ಹಣೆಗೆ ಕುಂಕುಮವಿಟ್ಟು, ತಲೆಗೆ ಹೂ ಮುಡಿಸಿ, ಮಡಿಲಕ್ಕಿ ತುಂಬಿದ್ದು ನೂರಾರು ಜನರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.