ತೋವಿನಕೆರೆ: ತೋವಿನಕೆರೆ ಹಾಗೂ ಸುತ್ತಮುತ್ತಲಿನ 17 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಮೊದಲು ಕೈಗೆತ್ತಿಕೊಂಡು ಆ ನಂತರ ಕೆರೆಗಳಿಗೆ ನೀರು ಹರಿಸುವ ಯೋಜನೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಭರವಸೆ ನೀಡಿದರು.
ಹೇಮಾವತಿ ನೀರನ್ನು ಕೆರೆಗಳಿಗೆ ಬಿಡುವಂತೆ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ಕಳೆದ ತಿಂಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ವಿ.ಪಾತರಾಜು ಅವರು ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆಯಲ್ಲಿ ರೈತರ ಮತ್ತು ಜನಪ್ರತಿನಿಧಿಗಳ ಸಭೆ ಏರ್ಪಡಿಸುವುದಾಗಿ ಭರವಸೆ ನೀಡಿ ಮುಷ್ಕರ ವಾಪಸ್ ಪಡೆಯುವಂತೆ ಮನವೊಲಿಸಿದ್ದರು.
ಅದರಂತೆ ಬುಧವಾರ ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ಎಇಇ ಸಿದ್ದಗಂಗಯ್ಯ 2005-2006ರಲ್ಲಿ 18 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವಂತೆ ಮಾತ್ರ ಆದೇಶವಾಗಿದೆ. ಮೇಲಧಿಕಾರಿಗಳ ಅನುಮತಿಗಾಗಿ ಕಾಯಲಾಗುತ್ತಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು.
20 ವರ್ಷಗಳಿಂದ ಯಾವುದೇ ಕೆರೆ ತುಂಬಿಲ್ಲ. ಅಂತರ್ಜಲ ಮಟ್ಟ 800 ಅಡಿ ಆಳಕ್ಕಿಳಿದಿದೆ. ವರ್ಷಕ್ಕೆ ಒಮ್ಮೆಯಾದರೂ ಕೆರೆಗಳನ್ನು ನೀರಿನಿಂದ ಭರ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಯನ್ನು ರೈತರ ನಿಯೋಗ ಒತ್ತಾಯಿಸಿತು.
ಸಭೆಯಲ್ಲಿ ತಹಶೀಲ್ದಾರ್ ವಿ.ಪಾತರಾಜು, ಇಒ ಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ಆರ್.ಲೋಕೇಶ್, ಜಿ.ಎಲ್.ಹನುಮಂತರಾಯಪ್ಪ, ಮಣುವಿನಕುರಿಕೆ ರವಿಕುಮಾರ್, ಅಗ್ರಹಾರದ ಬಸವರಾಜು, ಎಪಿಎಂಸಿ ಸದಸ್ಯ ವಿಜಯಕುಮಾರ್, ಬಿಜೆಪಿ ಪರಿಶಿಷ್ಟ ಪಂಗಡದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಸ್.ಕೃಷ್ಣಮೂರ್ತಿ, ವಿಎಸ್ಎಸ್ಎನ್ ಅಧ್ಯಕ್ಷ ಬಿ.ಹನುಮಂತರಾಯಪ್ಪ, ಎಸ್ಡಿಎಂಸಿ ಅಧ್ಯಕ್ಷ ಟಿ.ಸಿ.ಸಿದ್ದೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ವಿ.ವಿಜಯಕುಮಾರ್ ಜೈನ್, ಹನುಮಂತರಾಯಪ್ಪ, ರಾಜಣ್ಣ, ಯತಿರಾಜು, ಮುಖಂಡರಾದ ಟಿ.ಆರ್.ವಿಜಯಕುಮಾರ್, ಟಿ.ಆರ್.ನಾಗರಾಜು, ಎಸ್.ಕೆ.ಮಧುಸೂದನ್, ಟಿ.ಎಲ್.ಸಿದ್ದಗಂಗಯ್ಯ ಹಾಗೂ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.