ADVERTISEMENT

ಜಾತಿ ವ್ಯವಸ್ಥೆಯಿಂದ ಅನಾಹುತ:ಶಿವಪ್ರಸಾದ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:00 IST
Last Updated 1 ಅಕ್ಟೋಬರ್ 2012, 8:00 IST

ತುಮಕೂರು: ದೇಶದ ಕೆಟ್ಟ ಜಾತಿ ವ್ಯವಸ್ಥೆ ಕಾರಣದಿಂದ ಸ್ಥಳೀಯ ಮಹಾನ್ ವ್ಯಕ್ತಿಗಳು ಗಣನೆಗೆ ಬರಲಿಲ್ಲ. ಇಲ್ಲಿನ ಸ್ಥಳೀಯ ಪ್ರತಿಭೆಗಳು, ಅಂತಃಕರಣ ಉಳ್ಳವರು ಬೆಳಕಿಗೆ ಬರುತ್ತಿಲ್ಲ ಎಂದು ಅಂತರರಾಷ್ಟ್ರೀಯ ಚಿತ್ರ ಕಲಾವಿದ ಮತ್ತು ಸಾಹಿತಿ ಕೆ.ಟಿ.ಶಿವಪ್ರಸಾದ್ ವಿಷಾದಿಸಿದರು.

ನಗರದಲ್ಲಿ ವರದಕ್ಷಿಣೆ ವಿರೋಧಿ ಸಂಸ್ಥೆ ಮತ್ತು ಧಾನ್ಯ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸೂಲಗಿತ್ತಿ ನರಸಮ್ಮ ಅವರನ್ನು ಕುರಿತ `ಸಾವಿರ ಮಕ್ಕಳ ತಾಯಿ~ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಇರುವವರೆಗೆ ಕೆಳ ಜಾತಿಯವರು ಮಾಡಿದ ಉತ್ತಮ ಕೆಲಸ ಬೆಳಕಿಗೆ ಬರುವುದಿಲ್ಲ. ಇಂಥ ಅನಾಹುತ ತಪ್ಪಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸೂಲಗಿತ್ತಿ ನರಸಮ್ಮನನ್ನು ನರ್ಸ್ ಎಂದು ಕರೆಯಲು ಸಾಧ್ಯವಿಲ್ಲ. ಅವರು ಅಂತಃಕರಣವುಳ್ಳ ವೈದ್ಯೆ ಎನ್ನಬಹುದು. ಮದರ್‌ತೆರೇಸಾ ಮಾಡಿದಂತಹ ಕೆಲಸವನ್ನೇ ನರಸಮ್ಮ ಮಾಡಿದ್ದಾರೆ. ಅನುಭವವನ್ನು ಜ್ಞಾನವನ್ನಾಗಿ ಪರಿವರ್ತಿಸುವ ಮೂಲಕ ನಿಜವಾದ ವೈದ್ಯೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂದಿನ ವೈದ್ಯರು ಭಯದ ನೆರಳಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಿ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿದ್ದಾರೆಂದು ಅವರು ಟೀಕಿಸಿದರು.

ಸಾಹಿತಿ ಕೆ.ಬಿ.ಸಿದ್ದಯ್ಯ `ಸಾವಿರ ಮಕ್ಕಳ ತಾಯಿ~ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ನರಸಮ್ಮ ಮಾಡಿಸಿರುವ ಹೆರಿಗೆಗಳಲ್ಲಿ ಇದುವರೆಗೆ ಯಾವುದೇ ತಾಯಿ-ಶಿಶು ಮರಣ ಹೊಂದಿದ್ದು ಇಲ್ಲ. ಆದರೆ ಆಧುನಿಕ ತಂತ್ರಜ್ಞಾನ ಹೊಂದಿರುವ ಇಂದಿನ ಆಸ್ಪತ್ರೆಗಳಲ್ಲಿ ಶಿಶು-ತಾಯಿ ಮರಣ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತಾಯಿ- ಮಗುವನ್ನು ಪಾರು ಮಾಡುವ ಗುಣ ನರಸಮ್ಮಗೆ ಸಿದ್ಧಿಸಿರುವುದು ಅಸಾಮಾನ್ಯ ಶಕ್ತಿ. ಇದು ಅವರ ಅನುಭವದಿಂದಲೇ ಬಂದಿದ್ದು, ಅದೇ ಅಧ್ಯಾತ್ಮಿಕ ಜ್ಞಾನ ಎಂದರು.

ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಕೆ.ದೊರೈರಾಜು, ಎಸ್ಪಿ ಟಿ.ಆರ್.ಸುರೇಶ್, ಮಾಜಿ ಶಾಸಕ ತಿಮ್ಮರಾಯಪ್ಪ, ಲೇಖಕರಾದ ನಟರಾಜ್ ಬೂದಾಳ್, ವಡ್ಡಗೆರೆ ನಾಗರಾಜ್, ವೈದ್ಯೆ ಅರುಂಧತಿ, ಪುಸ್ತಕ ಸಂಪಾದಕರಾದ ಅನ್ನಪೂರ್ಣ ವೆಂಕಟನಂಜಪ್ಪ, ಬಾ.ಹ.ರಮಾಕುಮಾರಿ, ಮುಖಂಡರಾದ ಚೇಳೂರು ವೆಂಕಟೇಶ್ ಪಾವಗಡ ಶ್ರೀರಾಂ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.