ತುಮಕೂರು: ತಾಲ್ಲೂಕಿನ ಗೂಳೂರು ಮತ್ತು ಹೆಬ್ಬೂರು ಹೋಬಳಿಗಳ ಪರಿಶಿಷ್ಟ ಜಾತಿ, ಪಂಗಡ ಘಟಕದ ಕಾರ್ಯಕರ್ತರ ಸಭೆ ಭಾನುವಾರ ಗೂಳೂರು ಹನುಮಂತರಾಯ ದೇಗುಲದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಿಂಗಪ್ಪ, ಪರಿಶಿಷ್ಟ ಜಾತಿಯ ಕಾರ್ಯಕರ್ತರು ರಾಜಕೀಯವಾಗಿ ಬೆಳೆಯಬೇಕು. ರಾಜಕೀಯದಲ್ಲಿ ಮೇಲುಗೈ ಸಾಧಿಸಿದಾಗ ಮಾತ್ರ ಜನಾಂಗದ ಅಭಿವೃದ್ಧಿಯಾಗುತ್ತದೆ. ಮೂಲ ಸೌಕರ್ಯಗಳ ಬಳಕೆಯಿಂದ ಮಾತ್ರ ಏಳ್ಗೆ ಸಾಧ್ಯ ಎಂದರು.
ಆಡಳಿತಾರೂಢ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿದೆ. ಬಡವರು, ದಲಿತರು, ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಿರುವ ಸರ್ಕಾರದ ಸಚಿವರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಹಿಂದಿನಿಂದಲೂ ಶೋಷಣೆಗೆ ಒಳಗಾಗಿರುವ ದಲಿತರು ರಾಜಕೀಯವಾಗಿ ಬೆಳೆದರೆ ಮಾತ್ರ ದೇಶ ಕಟ್ಟಲು ಸಾಧ್ಯ. ಅಂಬೇಡ್ಕರ್, ಬಸವಣ್ಣ, ದೇವರಾಜ ಅರಸು ವ್ಯಕ್ತಿತ್ವವನ್ನು ಅನುಸರಿಸಬೇಕೆಂದು ಸಲಹೆ ಮಾಡಿದರು.
ಜೆಡಿಎಸ್ ಪರಿಶಿಷ್ಟರ ಘಟಕದ ವಿಭಾಗದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಜೆಡಿಎಸ್ನಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ ಎಂದರು.
ಮುಖಂಡರಾದ ಟಿ.ಎಚ್.ಕೃಷ್ಣಪ್ಪ, ಚಿಕ್ಕವೆಂಕಟಯ್ಯ, ವಿಜಯಕುಮಾರ್, ಸೋರೆಕುಂಟೆ ಕೃಷ್ಣಮೂರ್ತಿ, ಗೂಳೂರು ಕೃಷ್ಣಪ್ಪ, ಬಿ.ಎಲ್.ಮಂಜುನಾಥ್, ಎಲ್ಲಯ್ಯ, ಕೆಂಪನರಸಯ್ಯ, ರಾಮು, ಟಿ.ಆರ್.ನಾಗರಾಜು, ಎಚ್.ಮಲ್ಲಿಕಾರ್ಜುನ್ ಎಸ್.ರಂಗನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.