ತಿಪಟೂರು: ಪತಿಗೆ ಮತ್ತೊಂದು ವಿವಾಹದ ಸಂಭವ ಇದೆ ಎಂದು ಜ್ಯೋತಿಷಿ ಹೇಳಿದ್ದ ಭವಿಷ್ಯ ನಂಬಿ ಗೃಹಿಣಿಯೊಬ್ಬರು ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ದೊಡ್ಡ ಮಾರ್ಪನಹಳ್ಳಿಯಲ್ಲಿ ನಡೆದಿದೆ.ಗ್ರಾಮದ ಸಿದ್ದಲಿಂಗಮೂರ್ತಿ ಅವರ ಪತ್ನಿ ಲತಾ (30) ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು.
ನಗರ ಸಮೀಪದ ಗೊರಗೊಂಡನಹಳ್ಳಿಯ ಲತಾ ಮತ್ತು ಸಿದ್ದಲಿಂಗಮೂರ್ತಿ ಅವರ ವಿವಾಹ ಆರೂವರೆ ವರ್ಷದ ಹಿಂದೆ ನಡೆದಿತ್ತು.ಸಂಸಾರ ಅನ್ಯೋನ್ಯವಾಗಿಯೇ ಸಾಗಿತ್ತು.ಯಾರೊಂದಿಗೂ ಅಷ್ಟಾಗಿ ಮಾತನಾಡದ ಲತಾ ಸಂಸಾರ ಚೆನ್ನಾಗಿಯೇ ನಿಭಾಸುತ್ತಿದ್ದರು.
ಪತಿ ಮತ್ತು ಪತ್ನಿ ನಡುವೆ ಹೊಂದಾಣಿಕೆಯೂ ಇತ್ತು.ಐದೂವರೆ ವರ್ಷದ ಮಗನನ್ನು ಚೆನ್ನಾಗಿಯೇ ಸಾಕುತ್ತಿದ್ದರು.ಕುತೂಹಲಕ್ಕೆಂದು ಲತಾ ಇತ್ತೀಚೆಗೆ ಶಾಸ್ತ್ರ ಕೇಳಿದ್ದರು.ಶಾಸ್ತ್ರ ಕೇಳಿದಾಗಿನಿಂದಅವರು ದುಗುಡದ ಸ್ಥಿತಿಯಲ್ಲಿದ್ದರು.ಅಂತರ್ಮುಖಿಯಾಗಿ ಯೋಚಿಸುತ್ತಿದ್ದರು.
ಮನೆಯವರು ವಿಷಯದ ಸ್ಪಷ್ಟತೆ ಇಲ್ಲದ್ದರಿಂದ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಶನಿವಾರ ರಾತ್ರಿ ಮಲಗುವ ಕೋಣೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ವಿಷಯ ಬಹಿರಂಗವಾಗಿದೆ. ಜ್ಯೋತಿಷಿಯ ಭವಿಷ್ಯ ತನ್ನಲ್ಲಿ ದಿಗ್ಭ್ರಮೆ ಉಂಟುಮಾಡಿತ್ತು ಎಂದು ಅವರು ಪತ್ರದಲ್ಲಿ ಬರೆದಿಟ್ಟಿದ್ದಾರೆ. ಮಗನನ್ನು ಮಲಮಗನಂತೆ ನೋಡದೆ ಚೆನ್ನಾಗಿ ಸಾಕಿ ಎಂದೂ ಪತಿಗೆ ಬರೆಯಲಾಗಿದೆ.
ತಹಶೀಲ್ದಾರ್ ವಿಜಯಕುಮಾರ್ ಪಂಚನಾಮೆ ಮಾಡಿದ ನಂತರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.