ADVERTISEMENT

ತತ್ವಪದಗಳು ತಾರಮತ್ಯ ನಿವಾರಣೆಗೆ ಮದ್ದು

ಅಭಿನಂದನಾ ಸಮಾರಂಭದಲ್ಲಿ ವಿಮರ್ಶಕ ಡಾ.ನಟರಾಜ ಬೂದಾಳು ನುಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 6:01 IST
Last Updated 18 ಜೂನ್ 2018, 6:01 IST

ತುಮಕೂರು: ನಮ್ಮೊಳಗಿನ ಎಲ್ಲ ತರಹದ ತಾರತಮ್ಯಗಳನ್ನು ನಿವಾರಿಸಿ ಸುಂದರ ಬದುಕು ಕಟ್ಟಿಕೊಳ್ಳಲು ತತ್ವಪದ‌ಗಳು ಮದ್ದಾಗಬಲ್ಲದು ಎಂದು ವಿಮರ್ಶಕ ಡಾ.ನಟರಾಜ ಬೂದಾಳು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕ ಒಕ್ಕೂಟದಿಂದ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‘ತತ್ವಪದಗಳ ಮಹತ್ವ’ ಕುರಿತು ಮಾತನಾಡಿದರು.

ಈ ಯುಗದಲ್ಲಿಯೂ ಸಂಸ್ಕೃತ ಮಾದರಿ ಇಟ್ಟುಕೊಂಡೇ ಬೋಧನೆ ಮಾಡಲಾಗುತ್ತಿದೆ. ನಮ್ಮ ಪರಂಪರೆಯ ಬೆಳಕಿನಲ್ಲಿ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಅಗತ್ಯವಿದೆ. ನಿಷ್ಕಲ್ಮಶ ಬದುಕನ್ನು ಜೀವಿಸುತ್ತಿರುವ ಅನಾಮಿಕ ತತ್ವಪದಕಾರರ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ತಿಳಿಸಿದರು.

ADVERTISEMENT

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಪರಮಶಿವಮೂರ್ತಿ ಮಾತನಾಡಿ, ನಮ್ಮ ಪರಂಪರೆ ಶ್ರೀಮಂತವಾದದು. ಅದನ್ನು ಮತ್ತೆ ಪ್ರಚುರಪಡಿಸುವ ಕೆಲಸವನ್ನು ನಟರಾಜ ಬೂದಾಳು ಅವರ ಸಂಶೋಧನಾ ಹಾಗೂ ಸಾಹಿತ್ಯ ಚಟುವಟಿಕೆಗಳು ಮಾಡುತ್ತಿವೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜುಗಳ ತುಮಕೂರು ವಲಯದ ಅಧ್ಯಕ್ಷ ಡಾ.ಓ.ನಾಗರಾಜು ಮಾತನಾಡಿ, ಇಂದಿನ ಕಲುಷಿತ ಸಮಾಜಕ್ಕೆ ಅಗತ್ಯವಾದ ಉಪಶಮನ ಮಾಡುವ ಶಕ್ತಿ ತತ್ವಪದಗಳಿಗೆ ಇದೆ ಎಂದರು.

ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಸಿ.ಕೃಷ್ಣಪ್ಪ ಮಾತನಾಡಿ, ಕನ್ನಡ ಭಾಷೆ–ಸಾಹಿತ್ಯ ಇಂದು ಅವಗಣನೆಗೆ ಒಳಗಾಗುತ್ತಿದೆ. ಇದಕ್ಕೆ ಅವಕಾಶ ಇಲ್ಲದಂತೆ ಉದ್ಯೋಗಾವಕಾಶಗಳನ್ನು ಒದಗಿಸುವ ಪಠ್ಯಕ್ರಮ ರಚಿಸುವತ್ತ ಗಮನ ಹರಿಸಬೇಕಿದೆ ಎಂದರು.

ಈ ವೇಳೆ ಪಿಎಚ್‍.ಡಿ ಪದವಿ ಪಡೆದ ಬಡವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಮಾ.ನ.ದಿನೇಶ್, ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಬಿ.ಆರ್.ರೇಣುಕಪ್ರಸಾದ್, ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಜಲಜಾಕ್ಷಿ ಹಾಗೂ ಚಿಕ್ಕನಾಯಕನಹಳ್ಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಶಿವಣ್ಣ ಬೆಳವಡಿ ಅವರನ್ನು ಸನ್ಮಾನಿಸಲಾಯಿತು.

ಪ್ರೊ.ಶೈಲಾ ಕುಮಾರಿ, ಡಾ.ಚಿಕ್ಕಣ್ಣ, ಪ್ರೊ.ಬಿ.ಮಂಜೇಗೌಡ, ರಾಜೇಶ್ವರಿ, ಸೌಮ್ಯ ಇದ್ದರು. ಜೆ.ಗಂಗಾಧರ್ ಸ್ವಾಗತಿಸಿದರು. ಕೆ.ಎನ್.ಚೈತಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.